ಹೊಸಪೇಟೆ: ಇಲ್ಲಿನ ಹಂಪಿ ವಿಜಯ ವಿಠಲ ದೇಗುಲದ ವಾಹನ ಸಂಚಾರ ನಿಷೇಧಿತ ವಲಯದಲ್ಲಿ ಚುನಾವಣಾ ವೀಕ್ಷಕರು ವಾಹನಗಳಲ್ಲಿ ತೆರಳಿ ನಿಯಮ ಉಲ್ಲಂಘಿಸಿದ್ದಾರೆ.
ವಾಹನಗಳು ಉಗುಳುವ ಹೊಗೆಯಿಂದವಿಜಯ ವಿಠಲ ದೇಗುಲ ಸ್ಮಾರಕ ಅಂದಗೆಡಬಾರದು ಎಂಬ ಉದ್ದೇಶದಿಂದ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು (ಎ.ಎಸ್.ಐ.) ಆ ಪ್ರದೇಶದಲ್ಲಿ ಪ್ರವಾಸಿಗರಿಗಾಗಿ ಬ್ಯಾಟರಿಚಾಲಿತ ವಾಹನಗಳಿಗೆ ವ್ಯವಸ್ಥೆ ಮಾಡಿದೆ. ಹೀಗಿದ್ದರೂ ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಉದ್ದೇಶದಿಂದ ನೇಮಕಗೊಂಡಿರುವ ಅಧಿಕಾರಿಗಳೇ ಭಾನುವಾರ ನಿಯಮವನ್ನು ಗಾಳಿಗೆ ತೂರಿ ದೇಗುಲಕ್ಕೆ ನಾಲ್ಕೈದು ವಾಹನಗಳಲ್ಲಿ ತೆರಳಿದ್ದಾರೆ.
ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ‘ಜನಸಾಮಾನ್ಯರಿಗೆ ಒಂದು ನ್ಯಾಯ, ಅಧಿಕಾರಿಗಳಿಗೆ ಒಂದು ನ್ಯಾಯ’ ಎಂದು ಶ್ರೀಶೈಲ ಆಲ್ದಹಳ್ಳಿ ಎಂಬುವರು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. ವಾಟ್ಸ್ ಆ್ಯಪ್ನಲ್ಲೂ ಇದು ಹರಿದಾಡುತ್ತಿದೆ.
ರಾಜಕಾರಣಿಗಳು, ಹಿರಿಯ ಅಧಿಕಾರಿಗಳು ನಿರ್ಬಂಧಿತ ಪ್ರದೇಶದಲ್ಲಿ ವಾಹನಗಳೊಂದಿಗೆ ಹೋಗುವುದು ಸರ್ವೇ ಸಾಮಾನ್ಯವಾಗಿದ್ದು, ಈ ರೀತಿಯ ಘಟನೆಗಳು ಈ ಹಿಂದೆಯೂ ಸಾಕಷ್ಟು ಸಲ ನಡೆದಿವೆ. ಆದರೂ ಎ.ಎಸ್.ಐ. ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.