ಹೊಸಪೇಟೆ (ವಿಜಯನಗರ): ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹಂಪಿಯಲ್ಲಿ ಆಯೋಜಿಸಲಾಗಿರುವ ‘ಕೌಂಟ್ಡೌನ್’ ಕಾರ್ಯಕ್ರಮ ಭಾನುವಾರ ನಾಲ್ಕನೇ ವಾರವೂ ಮುಂದುವರೆಯಿತು.
ಭಾನುವಾರ ಬೆಳಿಗ್ಗೆ ಹಂಪಿ ಗಜಶಾಲೆ ಆವರಣದಲ್ಲಿ ಸೇರಿದ ನೂರಾರು ಜನರು ಯೋಗ ತರಬೇತಿ ಪಡೆದರು. ಎಲ್ಲರೂ ಶ್ವೇತ ವಸ್ತ್ರ ಧರಿಸಿ, ಶಿಸ್ತಿನಿಂದ ಸಾಲಿನಲ್ಲ ಕುಳಿತು ಯೋಗಾಭ್ಯಾಸ ಮಾಡಿದರು. ಬೆಂಗಳೂರಿನ ಶ್ವಾಸಕೇಂದ್ರದ ವಚನಾನಂದ ಸ್ವಾಮೀಜಿ ಅವರು ಯೋಗ ಹೇಳಿಕೊಟ್ಟರು.
‘ಪರಿಸರ ಹಾಗೂ ಯೋಗದ ನಡುವೆ ಸಂಬಂಧವಿದೆ. ಉತ್ತಮ ಪರಿಸರವಿದ್ದರೆ ಅದರ ನಡುವೆ ಯೋಗ ಮಾಡಬಹುದು. ಯೋಗದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು’ ಎಂದು ವಚನಾನಂದ ಸ್ವಾಮೀಜಿ ತಿಳಿಸಿದರು. ಇದೇ ವೇಳೆ ಶಿಬಿರಾರ್ಥಿಗಳಿಗೆ ಸಸಿ ವಿತರಿಸಿದರು.
ವಿದ್ಯಾದಾಸ ಬಾಬಾ, ಬಿಜೆಪಿ ಯುವ ಮುಖಂಡ ಸಿದ್ಧಾರ್ಥ್ ಸಿಂಗ್, ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ್ ಕೋರಿಶೆಟ್ಟಿ, ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಜಿಲ್ಲಾ ಅಧ್ಯಕ್ಷ ಅಶ್ವಿನ್ ಕೊತ್ತಂಬ್ರಿ ಇದ್ದರು.