ಹೊಸಪೇಟೆ: ‘ದೇಶ, ವಿದೇಶಗಳಿಂದ ಬರುವ ಅಂಗವಿಕಲರಿಗೆ ಹಂಪಿಯಲ್ಲಿನ ಸ್ಮಾರಕಗಳನ್ನು ನೋಡಲು ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಅಂಗವಿಕಲರ ಅಧಿನಿಯಮದ ಆಯುಕ್ತ ವಿ.ಎಸ್. ಬಸವರಾಜ ಹೇಳಿದರು.
ಭಾನುವಾರ ಹಾಗೂ ಸೋಮವಾರ ತಾಲ್ಲೂಕಿನ ಹಂಪಿಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಹಂಪಿಯಲ್ಲಿ ಅನೇಕ ಸ್ಮಾರಕಗಳು ಎತ್ತರದಲ್ಲಿವೆ. ಅಂತಹ ಕಡೆ ರ್ಯಾಂಪ್ ವ್ಯವಸ್ಥೆ ಮಾಡಲಾಗುವುದು. ಇನ್ನುಳಿದ ಕಡೆಗಳಲ್ಲಿ ವೀಲ್ ಚೇರ್ ಸೌಲಭ್ಯ ಒದಗಿಸಲಾಗುವುದು. ಅಂಗವಿಕಲರ ಸ್ನೇಹಿ ಶೌಚಾಲಯಗಳನ್ನು ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವೆ. ಹಂಪಿ ನೋಡಲು ಸ್ಥಳೀಯರ ಜತೆ ಹೊರ ದೇಶಗಳಿಂದ ಜನ ಬರುತ್ತಾರೆ. ಅದರಲ್ಲೂ ಅಂಗವಿಕಲರು ಬಂದರೆ ಅವರಿಗೆ ಸ್ಮಾರಕಗಳನ್ನು ನೋಡಲು ತೊಂದರೆ ಆಗಬಾರದು’ ಎಂದು ತಿಳಿಸಿದರು.
ಇದಕ್ಕೂ ಮುನ್ನ ಅವರು ಹಂಪಿ ವಿರೂಪಾಕ್ಷೇಶ್ವರ ದೇಗುಲಕ್ಕೆ ಭೇಟಿ ನೀಡಿ ವಿರೂಪಾಕ್ಷನ ದರ್ಶನ ಪಡೆದರು. ಬಳಿಕ ಕಮಲ ಮಹಲ್, ಗಜಶಾಲೆ, ಪುಷ್ಕರಣಿ, ಕಲ್ಲಿನ ತೇರು, ವಿಜಯ ವಿಠಲ, ರಾಣಿ ಸ್ನಾನಗೃಹ, ಉಗ್ರ ನರಸಿಂಹ, ಕೃಷ್ಣ ದೇವಸ್ಥಾನ, ಕಡಲೆಕಾಳು ಗಣಪ ಸ್ಮಾರಕಗಳನ್ನು ನೋಡಿದರು.
ಅಂಗವಿಕಲರ ಅಧಿನಿಯಮ ವ್ಯಕ್ತಿಗಳ ಆಯುಕ್ತ ಪದ್ಮನಾಭ, ರಾಜ್ಯ ಸಲಹೆಗಾರ ಹಂಪಣ್ಣ, ಅಂಗವಿಕಲರ ಸಬಲೀಕರಣ ಅಧಿಕಾರಿ ಮಹಾಂತೇಶ್, ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಅಧಿಕಾರಿ ವಿ. ಧನಂಜಯ, ವಿರೂಪಾಕ್ಷ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್. ಪ್ರಕಾಶ್ ರಾವ್ ಇದ್ದರು.