ಉಡುಪಿ: ಪೆರ್ಡೂರಿನಲ್ಲಿ ಈಚೆಗೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ದನದ ವ್ಯಾಪಾರಿ ಹುಸೇನಬ್ಬ ಅವರ ಮರಣೋತ್ತರ ಪರೀಕ್ಷಾ ವರದಿ ಬಂದಿದ್ದು ತಲೆ ಹಾಗೂ ಆಯಕಟ್ಟಿನ ಜಾಗಕ್ಕೆ ಹಲ್ಲೆ ನಡೆಸಿದ್ದರಿಂದರಿಂದ ಮೃತಪಟ್ಟಿದ್ದಾರೆ ಎಂಬ ಅಂಶಗಳು ವರದಿಯಲ್ಲಿವೆ.
ಹುಸೇನಬ್ಬ ಅವರ ದೇಹದ 21 ಕಡೆಗಳಲ್ಲಿ ಹಲ್ಲೆ ಗುರುತುಗಳಿದ್ದು ಕಿಡ್ನಿಗಳಿಗೆ ಹಾನಿಯಾಗಿದೆ.
ವೈದ್ಯರು ಸಲ್ಲಿಸಿದ್ದ ಮರಣೋತ್ತರ ಪರೀಕ್ಷಾ ವರದಿಯನ್ನು ಗುರುವಾರ ಸಂಜೆ ಸರ್ಕಾರಿ ಅಭಿಯೋಜಕರು ನ್ಯಾಯಾಲಯಕ್ಕೆ ಸಲ್ಲಿಸಿದರು. ಇದೇ ವೇಳೆ ಆರೋಪಿಗಳ ಪರ ವಕೀಲರು ಜಾಮೀನಿಗಾಗಿ ಮನವಿ ಮಾಡಿದರು.
ವರದಿಯನ್ನು ಪರಿಶೀಲಿಸಿದ ನ್ಯಾಯಾಧೀಶರು ಜಾಮೀನು ನೀಡುವ ಸಂಬಂಧ ಜೂನ್ 18ಕ್ಕೆ ಆದೇಶ ನೀಡುವುದಾಗಿ ತಿಳಿಸಿದರು ಎಂದು ಸರ್ಕಾರಿ ಅಭಿಯೋಜರು ಪ್ರಜಾವಾಣಿಗೆ ಮಾಹಿತಿ ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ:
ಮೇ 30ರಂದು ಪೆರ್ಡೂರು ಬಳಿ ಸ್ಕಾರ್ಪಿಯೊ ವಾಹನದಲ್ಲಿ ದನಗಳನ್ನು ಸಾಗಿಸುತ್ತಿದ್ದ ವೇಳೆ ವಾಹನವನ್ನು ತಡೆದು ಹುಸೇನಬ್ಬ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು.
ಗಂಭೀರವಾಗಿ ಗಾಯಗೊಂಡಿದ್ದ ಅವರು ಸಮೀಪದ ಹಿರಿಯಡಕ ಠಾಣೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದರು.
ಬಜರಂಗದಳದ ಕಾರ್ಯಕರ್ತರು ಹುಸೇನಬ್ಬ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಮೃತರ ಸಹೋದರ ದೂರು ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರು 10 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರಲ್ಲಿ ಹಿರಿಯಡಕ ಠಾಣೆ ಪಿಎಸ್ಐ ಡಿ.ಎನ್.ಕುಮಾರ್, ಇಬ್ಬರು ಪೊಲೀಸ್ ಸಿಬ್ಬಂದಿ ಕೂಡ ಇದ್ದರು.