ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್‌ ಕುರಿತ ಧೋರಣೆ ಬದಲಾಗಲಿ: ಜಿಲ್ಲಾಧಿಕಾರಿ

ವಿವಿಧೆಡೆ ಸಸಿ ನೆಟ್ಟು, ಗಿಡಗಳ ವಿತರಣೆ, ಜಾಥಾ ಮೂಲಕ ಪರಿಸರ ದಿನಾಚರಣೆ
Last Updated 6 ಜೂನ್ 2018, 10:31 IST
ಅಕ್ಷರ ಗಾತ್ರ

ಚಾಮರಾಜನಗರ: ‌ ‘ಪ್ಲಾಸ್ಟಿಕ್‌ ಬಗೆಗಿನ ನಮ್ಮ ಧೋರಣೆಯನ್ನು ಬದಲಾಯಿಸದಿದ್ದರೆ ಅಪಾಯ ತಪ್ಪಿದ್ದಲ್ಲ’ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಎಚ್ಚರಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆ ಜಂಟಿಯಾಗಿ ಮಂಗಳವಾರ ಆಯೋಜಿಸಿದ್ದ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮಾಲಿನ್ಯ ಉಂಟುಮಾಡುವ ಪ್ಲಾಸ್ಟಿಕ್‌, ಈಗ ನಮಗೆ ತೊಡಕಾಗಿದೆ. 10ರಿಂದ 15 ವರ್ಷಗಳ ಹಿಂದೆ ಪ್ಲಾಸ್ಟಿಕ್‌ಗೆ ಹೆಚ್ಚು ಪ್ರಾಮುಖ್ಯತೆ ಸಿಕ್ಕಿತ್ತು. ಗಿಡ ಮರಗಳನ್ನು ಸಂರಕ್ಷಿಸುವುದಕ್ಕಾಗಿ ನಾವು ಹೆಚ್ಚು ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಬಳಸಬೇಕು ಎಂಬ ಪ್ರವೃತ್ತಿ ಆಗ ಬೆಳೆದಿತ್ತು. ಆದರೆ, ಈ ಅದರಿಂದಾಗುವ ಹಾನಿಯ ಬಗ್ಗೆ ಈಗ ಎಲ್ಲರಿಗೂ ಗೊತ್ತಾಗಿದೆ’ ಎಂದು ಹೇಳಿದರು.

‘ಪ್ಲಾಸ್ಟಿಕ್‌ಗಳ ನಿಯಂತ್ರಣದ ಜವಾಬ್ದಾರಿ ಸರ್ಕಾರದ್ದು ಮಾತ್ರ ಅಲ್ಲ, ಎಲ್ಲ ಪ್ರಜೆಗಳಿಗೂ ಆ ಕರ್ತವ್ಯ ಇದೆ. ನಾವು ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಸ್ವಚ್ಛತಾ ಕಾರ್ಯಕ್ರಮ ಮೊದಲಿಗೆ ನಮ್ಮ ಮನೆಯಿಂದಲೇ ಆರಂಭವಾಗಬೇಕು. ಪ್ಲಾಸ್ಟಿಕ್‌ ಬಗ್ಗೆ ನಮ್ಮಲ್ಲಿರುವ ಮನೋಭಾವನೆ ಬದಲಾಗಬೇಕು. ಮಕ್ಕಳಿಂದ ಇದು ಆರಂಭವಾಗಬೇಕು. ಅವರು ತಂದೆ ತಾಯಿಗೆ ಇದರ ಅಪಾಯದ ಬಗ್ಗೆ ಹೇಳುವಂತಾಗಬೇಕು’ ಎಂದು ಅಭಿಪ್ರಾಯಪಟ್ಟರು.

ಕಸ ಬೇರ್ಪಡಿಸಿ: ‘ಹಸಿ ಕಸದೊಂದಿಗೆ ಒಣ/ಪ್ಲಾಸ್ಟಿಕ್‌ ಕಸವನ್ನು ಸೇರಿಸಬೇಡಿ. ಮನೆಯಲ್ಲೇ ಇವುಗಳೆರಡನ್ನು ಪ್ರತ್ಯೇಕಿಸುವ ಹವ್ಯಾಸವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು’ ಎಂದು ಕರೆ ನೀಡಿದರು.

ನಮ್ಮ ಹೆಮ್ಮೆ: ‘ಚಾಮರಾಜನಗರ ಜಿಲ್ಲೆಯಲ್ಲಿ ಶೇ 49ರಷ್ಟು ಅರಣ್ಯ ಪ್ರದೇಶ ಇದೆ. ಇದು ನಮಗೆ ಹೆಮ್ಮೆಯ ವಿಷಯ. ಯಾವುದೇ ಕಾರಣಕ್ಕೂ ಇದನ್ನು ಕಡಿಮೆ ಮಾಡಲು ನಾವು ಬಿಡಬಾರದು’ ಎಂದು ಅವರು ಹೇಳಿದರು.

ಕಾನೂನು ಮೂಲಕ ಸಾಧ್ಯವಿಲ್ಲ: ‘ಪ್ಲಾಸ್ಟಿಕ್‌ ನಮ್ಮ ಜೀವನದ ಭಾಗವೇ ಆಗಿ ಹೋಗಿದೆ. ಕಾರ್ಯಸಾಧುವಲ್ಲದ ವಿಚಾರಗಳನ್ನು ಕಾನೂನು ಮೂಲಕ ಬಲವಂತವಾಗಿ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ. ಇದರ ಅನುಭವ ನನಗೆ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ಲಾಸ್ಟಿಕ್‌ ಅನ್ನು ಸಂಪೂರ್ಣವಾಗಿ ನಿಷೇಧ ಮಾಡಿ ಕಷ್ಟವನ್ನು ಅನುಭವಿಸಿದ್ದೆವು’ ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ಹರೀಶ್‌ ಕುಮಾರ್‌ ಅಸಹಾಯಕತೆ ವ್ಯಕ್ತಪಡಿಸಿದರು.

‘ಹೊಸ ರೀತಿಯ ಅಥವಾ ಪಾಶ್ಚಾತ್ಯ ಅಭಿವೃದ್ಧಿಯ ಚಿಂತನೆ ನಮ್ಮ ದೇಶಕ್ಕೆ ಅಷ್ಟೊಂದು ಹೊಂದುವುದಿಲ್ಲ. ಹೊಸ ರೀತಿಯ ಅಭಿವೃದ್ಧಿಯ ಯೋಚನೆಯಿಂದಲೇ ಈ ಸಮಸ್ಯೆಗಳೆಲ್ಲ ಉದ್ಭವಿಸುತ್ತಿವೆ. ಕಾಡಿನ ಮಧ್ಯೆ ಬೆಳೆದ ನಮಗೆ ಹಸಿಕಸ, ಒಣಕಸ, ದ್ರವ ಕಸ ಎಂಬುದೆಲ್ಲ ಗೊತ್ತೇ ಇರಲಿಲ್ಲ’ ಎಂದರು.

‘ನಾವು ಸೂಕ್ತ ಸಮಯದಲ್ಲಿ ಎಚ್ಚರ ವಹಿಸದಿದ್ದರೆ ಮುಂದಿನ ಪೀಳಿಗೆಯವರಿಗೆ ಪರಿಸರವನ್ನು ಉಳಿಸಲು ಸಾಧ್ಯವಿಲ್ಲ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾದೇಶಿಕ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್‌ ಕುಮಾರ್ ಮೀನಾ ಮಾತನಾಡಿ, ‘ಮುಂದಿನ ಪೀಳಿಗೆಗೂ ಆರೋಗ್ಯಕರ ಪರಿಸರವನ್ನು ಉಳಿಸಲು ಈಗಿನ ಮಕ್ಕಳು ಶ್ರಮಿಸಬೇಕು’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಹಿರಿಯ ಸಿವಿಲ್ ನ್ಯಾಯಾಧೀಶೆ ಸಿ.ಜಿ. ವಿಶಾಲಾಕ್ಷಿ ಅವರು ಮಾತನಾಡಿದರು.

ನಿಸರ್ಗ ಸಂಧಾನ ಎಂಬ ಪುಸ್ತಕವನ್ನು ಜಿಲ್ಲೆಯ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ವಿಕ್ರಮ್‌ ಆಮ್ಟೆ ಬಿಡುಗಡೆ ಮಾಡಿದರು. ರಾಮಸಮುದ್ರದ ಸಿಆರ್‌ಬಿಪಿ ಶಾಲೆಯ ಮುಖ್ಯೋಪಾಧ್ಯಾಯ ಹಾಗೂ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಬಿ. ಸುಜಯ್ ಕುಮಾರ್ ವಿಶೇಷ ಉಪನ್ಯಾಸ ನೀಡಿದರು.

ಬಿಆರ್‌ಟಿ ಹುಲಿಸಂರಕ್ಷಿತ ಪ್ರದೇಶದ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ಶಂಕರ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ. ಮಹದೇವಪ್ಪ, ಹಿರಿಯ ಪರಿಸರ ಅಧಿಕಾರಿ ಎಂ.ಜಿ. ರಘುರಾಮ್‌ ಹಾಗೂ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಬಿ.ಎಲ್‌. ಶಿವಪ್ರಸಾದ್‌ ಮೊದಲಾದವರು ಹಾಜರಿದ್ದರು.

ಬಹುಮಾನ ವಿತರಣೆ

ಪರಿಸರ ದಿನಾಚರಣೆಯ ಅಂಗವಾಗಿ ಜೂನ್‌ 1ರಂದು ನಡೆದಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.

ಹಿರಿಯ ಪ್ರಾಥಮಿಕ ಶಾಲಾ ವಿಭಾಗ: ಪ್ರಥಮ: ನಿಧೀತಾ ಬಿ.ಎನ್‌ (3ನೇ ತರಗತಿ), ಸಂತ ಫ್ರಾನ್ಸಿಸ್‌ ಶಾಲೆ, ಚಾಮರಾಜನಗರ. ದ್ವಿತೀಯ: ಕುಶಲ್ (2ನೇ ತರಗತಿ), ಯೂನಿವರ್ಸ್‌ ಶಾಲೆ. ತೃತೀಯ: ಬೀ.ಬೀ.ಹಜೀರಾ (4ನೇ ತರಗತಿ), ಆದರ್ಶ ಕಾನ್ವೆಂಟ್‌. ಸಮಾಧಾನಕರ ಬಹುಮಾನ: ಜೀವನ್‌ ಎಂ. (1ನೇ ತರಗತಿ), ಸಂತ ಫ್ರಾನ್ಸಿಸ್‌ ಶಾಲೆ.

‌ಹಿರಿಯ ಪ್ರಾಥಮಿಕ ವಿಭಾಗ: ಪ್ರಥಮ: ಮೀನಾ (7ನೇ ತರಗತಿ), ಮೌಲಾನಾ ಆಜಾದ್‌ ಇಂಗ್ಲಿಷ್‌ ಶಾಲೆ. ದ್ವಿತೀಯ: ಎಂ. ಮಹಾಲಕ್ಷ್ಮಿ (5ನೇ ತರಗತಿ), ಸಂತ ಫ್ರಾನ್ಸಿಸ್‌ ಶಾಲೆ. ತೃತೀಯ: ಸಂಜಯ್‌ (7ನೇ ತರಗತಿ), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಂದಕವಾಡಿ. ಸಮಾಧಾನಕರ ಬಹುಮಾನ: ಫಾತಿಮಾ ಯುಸಾರಿಯಾ (7ನೇ ತರಗತಿ), ಯೂನಿವರ್ಸ್‌ ಶಾಲೆ.

ಪ್ರೌಢ ಶಾಲೆ ವಿಭಾಗ: ಪ್ರಥಮ: ವೈ.ಬಿ.ರಘುನಂದನ್‌ (10ನೇ ತರಗತಿ), ಎಂ.ಸಿ.ಎಸ್‌ ಪ್ರೌಢಶಾಲೆ, ಸೋಮವಾರಪೇಟೆ. ದ್ವಿತೀಯ: ಎಂ.ಶಿವನಾಗು (10ನೇ ತರಗತಿ), ಸರ್ಕಾರಿ ಎಂ.ಸಂಗಶೆಟ್ಟಿ ಪಿ.ಯು. ಕಾಲೇಜು, ಕುದೇರು. ತೃತೀಯ: ಅಭಿ ಮಲ್ಲಿಕ್‌ (10ನೇ ತರಗತಿ), ಯೂನಿವರ್ಸ್‌ ಶಾಲೆ, ಚಾಮರಾಜನಗರ. ಸಮಾಧಾನಕರ ಬಹುಮಾನ: ಕೀರ್ತನಾ ಸಿ.ಹೊನ್ನಪ್ಪ (10ನೇ ತರಗತಿ), ಆದರ್ಶ ಕಾನ್ವೆಂಟ್‌, ಚಾಮರಾಜನಗರ.

ವಿವಿಧೆಡೆ ಆಚರಣೆ

‘ಪ್ಲಾಸ್ಟಿಕ್‌ನಿಂದಾಗುವ ಮಾಲಿನ್ಯವನ್ನು ತಡೆಯಿರಿ’ ಎಂಬ ಘೋಷವಾಕ್ಯದ ಅಡಿಯಲ್ಲಿ ಈ ಬಾರಿಯ ಪರಿಸರ ದಿನಾಚರಣೆಯನ್ನು ಪಟ್ಟಣದಲ್ಲಿರುವ ವಿವಿಧ ಶಾಲಾ ಕಾಲೇಜು ಸೇರಿದಂತೆ ವಿವಿಧ ಶೈಕ್ಷಣಿಕ ಸಂಸ್ಥೆಗಳು, ಸಂಘ ಸಂಸ್ಥೆಗಳಲ್ಲಿ ‌ಮತ್ತು ಸರ್ಕಾರಿ ಕಚೇರಿಗಳಲ್ಲಿ ಮಂಗಳವಾರ ಆಚರಿಸಲಾಯಿತು. ಆ ಪ್ರಯುಕ್ತ ಗಿಡಗಳನ್ನು ನೆಡುವುದು ಮತ್ತು ಸಸಿಗಳನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT