ಹೈದರಾಬಾದ್: ಮಾದಕವಸ್ತು ಸಾಗಣೆ ಪ್ರಕರಣದ ಆರೋಪಿಯಿಂದ ಲಂಚ ಪಡೆದ ಆರೋಪ ಎದುರಿಸುತ್ತಿದ್ದ ತೆಲಂಗಾಣದ ನಾಂಪಲ್ಲಿಯ ಒಂದನೇ ಹೆಚ್ಚುವರಿ ಮೆಟ್ರೊಪಾಲಿಟನ್ ಸೆಷನ್ಸ್ ನ್ಯಾಯಾಧೀಶ ರಾಧಾಕೃಷ್ಣಮೂರ್ತಿ ಮನೆ ಮೇಲೆ ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಗುರುವಾರ ತಡರಾತ್ರಿ ದಾಳಿ ನಡೆಸಿದೆ.
ಹೈದರಾಬಾದ್ ಹೈಕೋರ್ಟ್ ನಿರ್ದೇಶನದಂತೆ ಪ್ರಕರಣ ದಾಖಲಿಸಿಕೊಂಡಿರುವ ಎಸಿಬಿ ಅಧಿಕಾರಿಗಳು, ರಾಧಾಕೃಷ್ಣಮೂರ್ತಿ ಅವರ ನಾಂಪಲ್ಲಿ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಮರುಪಕ ದತ್ತು ಎಂಬ ಎಂ.ಟೆಕ್ ವಿದ್ಯಾರ್ಥಿಯನ್ನು ಮಾದಕವಸ್ತು ಸಾಗಣೆ ಪ್ರಕರಣದಲ್ಲಿ ಕಳೆದ ಸೆಪ್ಟೆಂಬರ್ 13ರಂದು ಪೊಲೀಸರು ಬಂಧಿಸಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ಈತನಿಗೆ ಜಾಮೀನು ಕೊಡಿಸಲು ಖ್ಯಾತ ವಕೀಲ ಟಿ. ಶ್ರೀರಂಗರಾವ್ ಜಾಮೀನು ಅರ್ಜಿ ಸಲ್ಲಿಸಿದ್ದರು.
ಆತಂಕದಲ್ಲಿ ಮುಳುಗಿದ್ದ ವಿದ್ಯಾರ್ಥಿಯ ಕುಟುಂಬ ಸದಸ್ಯರು ಮಧ್ಯವರ್ತಿಗಳ ಮೂಲಕ ರಾಧಾಕೃಷ್ಣಮೂರ್ತಿ ಅವರ ಸಂಪರ್ಕ
ಸಾಧಿಸಿದ್ದರು.
₹7.5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ನ್ಯಾಯಾಧೀಶರು, ಮಧ್ಯವರ್ತಿಗಳ ಮೂಲಕ ಅದನ್ನು ಪಡೆದಿದ್ದರು ಎಂಬುದು ಅವರ ಮೇಲಿರುವ ಆರೋಪ.