ಹೊಸಪೇಟೆ: ಹಂಪಿ ಉತ್ಸವಕ್ಕೆ ಆಗ್ರಹಿಸಿ ಜಿಲ್ಲೆಯ ವಿವಿಧ ಭಾಗದ ಕಲಾವಿದರು ನಗರದ ರೋಟರಿ ವೃತ್ತದಿಂದ ತಾಲ್ಲೂಕಿನ ಹಂಪಿ ವರೆಗೆ ಪಾದಯಾತ್ರೆ ಕೈಗೊಂಡಿದ್ದಾರೆ.
ಹಂಪಿ ವೈಭವದ ಕುರಿತು ಹಾಡು ಹಾಡುತ್ತ, ಭಜನೆ ಮಾಡುತ್ತ ಪಾದಯಾತ್ರೆ ಮುಂದುವರಿದಿದೆ.
'ಅತಿವೃಷ್ಟಿ-ಅನಾವೃಷ್ಟಿ ಏನೇ ಆಗಲಿ ಮೈಸೂರು ದಸರಾ ನಿಲ್ಲುವುದಿಲ್ಲ. ಆದರೆ, ಹಂಪಿ ಉತ್ಸವಕ್ಕೆ ಮಾತ್ರ ಸರ್ಕಾರ ಕುಂಟು ನೆಪ ಒಡ್ಡುತ್ತಿದೆ. ಇದು ಸರಿಯಾದ ಧೋರಣೆಯಲ್ಲ. ಸರ್ಕಾರದ ನಿಲುವು ಖಂಡಿಸಿ ಜಿಲ್ಲೆಯ ಎಲ್ಲ ಭಾಗದ ಕಲಾವಿದರು ಪಾದಯಾತ್ರೆ ಕೈಗೊಂಡಿದ್ದೇವೆ ಎಂದು ರಂಗಭೂಮಿ ಕಲಾವಿದ ಪಿ.ಅಬ್ದುಲ್ಲಾ ಹೇಳಿದರು.
ಸತತ ನಾಲ್ಕು ವರ್ಷಗಳಿಂದ ಜಿಲ್ಲೆಯಲ್ಲಿ ಬರ ಇದೆ. ಹಾಗೇ ನೋಡಿದರೆ ಈ ಸಲ ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಕೃಷಿಗೆ ಎರಡನೇ ಬಾರಿಗೆ ನೀರು ಹರಿಸಲಾಗಿದೆ. ಹೀಗಿದ್ದರೂ ಹಂಪಿ ಉತ್ಸವಕ್ಕೆ ಹಿಂದೇಟು ಹಾಕುತ್ತಿರುವುದು ಸರಿಯಲ್ಲ ಎಂದರು.