ಹೊಸಪೇಟೆ: ರಸ್ತೆ ಸುರಕ್ಷತಾ ಸಪ್ತಾಹದ ಪ್ರಯುಕ್ತ ಸಂಚಾರ ಪೊಲೀಸರು ಮಂಗಳವಾರ ನಗರದಲ್ಲಿ ಹೆಲ್ಮೆಟ್ ಧರಿಸುವುದರ ಕುರಿತು ಜನಜಾಗೃತಿ ಬೈಕ್ ರ್ಯಾಲಿ ನಡೆಸಿದರು.
ಉಪವಿಭಾಗಾಧಿಕಾರಿ ಪಿ.ಎನ್. ಲೋಕೇಶ್, ನಗರಸಭೆ ಅಧ್ಯಕ್ಷ ಗುಜ್ಜಲ್ ನಿಂಗಪ್ಪನವರುಮುನ್ಸಿಪಲ್ ಮೈದಾನದಲ್ಲಿ ರ್ಯಾಲಿಗೆ ಚಾಲನೆ ನೀಡಿದರು.
ರ್ಯಾಲಿಯು ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ರೋಟರಿ ವೃತ್ತ, ಬಸ್ ನಿಲ್ದಾಣ, ಮೂರಂಗಡಿ ವೃತ್ತ, ಮೇನ್ ಬಜಾರ್, ರಾಮಾ ಟಾಕೀಸ್, ವಾಲ್ಮೀಕಿ ವೃತ್ತ, ಮಾರ್ಕಂಡೇಶ್ವರ ದೇವಸ್ಥಾನದ ಮಾರ್ಗವಾಗಿ ಹಾದು ಮುನ್ಸಿಪಲ್ ಮೈದಾನದಲ್ಲಿ ಸಮಾವೇಶಗೊಂಡಿತು.
ರ್ಯಾಲಿಯಲ್ಲಿ 100 ಬೈಕ್, 50ಕ್ಕೂ ಹೆಚ್ಚು ಆಟೊಗಳು ಇದ್ದವು. ಇದೇ ವೇಳೆ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಮಾಹಿತಿಯುಳ್ಳ ಪೋಸ್ಟರ್ಗಳನ್ನು ಆಟೊ ನಿಲ್ದಾಣ, ಬಸ್ ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಲಾಯಿತು. ರ್ಯಾಲಿ 100ಕ್ಕೂ ಹೆಚ್ಚು ಬೈಕ್ ಹಾಗೂ 50ಕ್ಕೂ ಹೆಚ್ಚು ಆಟೋಗಳು ಭಾಗವಹಿಸಿದ್ದವು.
‘ನಿಯಮ ಪಾಲಿಸದ ಕಾರಣ ಅಪಘಾತಗಳು ಸಂಭವಿಸುತ್ತಿವೆ. ಬಹುತೇಕ ಅಪಘಾತಗಳಲ್ಲಿ ತಲೆಗೆ ಏಟು ಬಿದ್ದು ಜನ ಜೀವ ಕಳೆದುಕೊಳ್ಳುತ್ತಿದ್ದಾರೆ. ಹೆಲ್ಮೆಟ್ ಧರಿಸಿಕೊಂಡು ಓಡಿಸುವುದು ಹೆಚ್ಚು ಸುರಕ್ಷಿತ’ ಎಂದು ಸಂಚಾರ ಠಾಣೆಯ ಸಿ.ಪಿ.ಐ. ಅಯ್ಯನಗೌಡ ಪಾಟೀಲ ತಿಳಿಸಿದರು.
ಆಟೊ ಫೆಡರೇಷನ್ ಮುಖಂಡ ಕೆ.ಎಂ.ಸಂತೋಷ್ ಕುಮಾರ್, ಉದ್ಯಮಿ ಬಿ.ಎನ್. ಮಂಜುನಾಥ್, ಬಿರ್ಲಾ ಕಂಪನಿಯ ಸಿಬ್ಬಂದಿ ಇದ್ದರು.