ಹೊಸಪೇಟೆ: ಕಲುಷಿತ ನೀರು ಸೇವನೆಯಿಂದ ವಾಂತಿ, ಬೇಧಿ ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ.
ಐದು ದಿನಗಳಲ್ಲಿ50ಕ್ಕೂ ಹೆಚ್ಚು ಜನ ಇಲ್ಲಿನ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶನಿವಾರ ಒಂದೇ ದಿನ 20ಕ್ಕೂ ಹೆಚ್ಚು ಜನ ದಾಖಲಾಗಿದ್ದರು. ಭಾನುವಾರ ಮತ್ತೆ ಏಳು ಜನರಲ್ಲಿ ವಾಂತಿ, ಬೇಧಿ ಕಾಣಿಸಿಕೊಂಡಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿ, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ನಗರದ ಬಾಣದಕೇರಿ, ಚಿತ್ತವಾಡ್ಗಿ, ವರಕೇರಿ, ಚಲುವಾದಿ ಕೇರಿ, ಎಸ್.ಆರ್.ನಗರ, ಚಪ್ಪರದಳ್ಳಿ, ಅಮರಾವತಿ, ಭಾರತಿ ನಗರ, ಗಾಂಧಿ ನಗರ, ಚಿತ್ರಕೇರಿ, ಪಟೇಲನಗರ, ಕುಂಚಗಾರ ಓಣಿ, ಊರಮ್ಮ ಬಯಲು,ಸಿದ್ದಲಿಂಗಪ್ಪ ಚೌಕಿಯ ಜನ ಆಸ್ಪತ್ರೆಗೆ ದಾಖಲಾದವರಲ್ಲಿ ಸೇರಿದ್ದಾರೆ.
‘ನೀರಿನ ಪೈಪ್ಲೈನ್ ಒಡೆದು, ಚರಂಡಿ ನೀರು ಮಿಶ್ರಣಗೊಂಡಿರುವುದರಿಂದ ಈ ಸಮಸ್ಯೆಯಾಗಿದೆ ಎಂದು ತಿಳಿದು ಬಂದಿದೆ. ಈಗ ಅದನ್ನು ಸರಿಪಡಿಸಲಾಗಿದೆ. ಜನ ಕುದಿಸಿ, ಆರಿಸಿದ ನೀರು ಕುಡಿಯಬೇಕು. ಕೈಗಳನ್ನು ಚೆನ್ನಾಗಿ ತೊಳೆದುಕೊಂಡು ಆಹಾರ ಸೇವಿಸುವಂತೆ ತಿಳಿಸಲಾಗಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಭಾಸ್ಕರ್ ‘ಪ್ರಜಾವಾಣಿ’ಗೆ ತಿಳಿಸಿದರು.