ಹೊಸಪೇಟೆ: ‘ಇಷ್ಟಲಿಂಗ ಅನುಸಂಧಾನದಿಂದ ಆಯುಷ ವೃದ್ಧಿಯಾಗುವುದು. ಇಷ್ಟಲಿಂಗವನ್ನು ಯಾವುದೇ ಜಾತಿ, ಧರ್ಮದವರು ಧರಿಸಿ ಅನುಷ್ಠಾನ ಮಾಡಬಹುದು’ ಎಂದು ನವದೆಹಲಿ ತೋಂಟದಾರ್ಯ ಶಾಖಾ ಮಠದ ಶರಣ ಮಹಾಂತ ದೇವರು ತಿಳಿಸಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದಿಂದ ಹುಣ್ಣಿಮೆ ಅಂಗವಾಗಿ ಮಂಗಳವಾರ ಸಂಜೆ ತಾಲ್ಲೂಕಿನ ಬೈಲುವದ್ದಿಗೇರಿಯಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ಸಂಚಾರ ಶರಣತತ್ವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಇಷ್ಟಲಿಂಗ ಕೇವಲ ಇಷ್ಟಾರ್ಥಗಳನ್ನು ಈಡೇರಿಸುವ ಸಾಧನವಾಗಿರದೆ ಲೋಕ ಕಲ್ಯಾಣಕ್ಕೆ ಕಾರಣವಾಗುವ ಪರಿಣಾಮಕಾರಿ ಅಂಶಗಳಿಂದ ಕೂಡಿದೆ. 12 ನೇ ಶತಮಾನದಲ್ಲಿ ಬಸವಾದಿ ಶರಣರು ಹತ್ತು ಹಲವು ಪ್ರಯೋಗ ಮಾಡಿ ಇಷ್ಟಲಿಂಗವನ್ನು ಸಿದ್ಧಪಡಿಸಿ ಕೊಟ್ಟಿದ್ದಾರೆ. ಅದರಲ್ಲಿರುವ ಚಂದ್ರಕಾಂತ ಶಿಲೆ, ಸೂರ್ಯಕಾಂತ ಶಿಲೆ, ಇಂಗಳೀಕ ಮುಂತಾದ ಒಂಬತ್ತು ಮಿಶ್ರಣಗಳು ದೇಹದ ಆರೋಗ್ಯಕ್ಕೆ ಚೈತನ್ಯ ತುಂಬುತ್ತವೆ’ ಎಂದು ಹೇಳಿದರು.
ಮಲಪನಗುಡಿಯ ಬಸವಕಿರಣ ಸ್ವಾಮಿ, ‘ಸಮಯದ ಬಗ್ಗೆ ಮಾಹಿತಿ ಬೇಕಾದವರು ಕೈಗಡಿಯಾರ ಕಟ್ಟಿಕೊಂಡರೆ, ಆತ್ಮಸಾಕ್ಷಾತ್ಕಾರ ಬೇಕಾದವರು ಇಷ್ಟಲಿಂಗ ಕಟ್ಟಿಕೊಳ್ಳಬಹುದು’ ಎಂದು ತಿಳಿಸಿದರು.
ರೇವಯ್ಯ ಸ್ವಾಮಿ, ‘ಶರಣ ಸಾಹಿತ್ಯ ಪರಿಷತ್ತು ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳಿಂದ ತಾಲ್ಲೂಕಿನಲ್ಲಿ ಶರಣ ಪರಂಪರೆಯ ಬಗ್ಗೆ ದೊಡ್ಡ ಜಾಗೃತಿ ಮೂಡಿಸುತ್ತಿದೆ. ಇದು ನಿರಂತರವಾಗಿ ಹೀಗೆಯೇ ಮುಂದುವರೆಯಬೇಕು’ ಎಂದು ಹೇಳಿದರು.
ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಎಚ್. ಬಸವರಾಜ, ಕಾರ್ಯಕ್ರಮದ ಸಂಚಾಲಕ ಮಾವಿನಳ್ಳಿ ಬಸವರಾಜ, ಮುಖಂಡರಾದ ಡಾ. ಅಮರೇಶ್ವರ, ಅರುಣಾ ಶಿವಾನಂದ, ವಿಜಯಲಕ್ಷ್ಮಿ ಚೇತನ್, ಮಹಂತರೆಡ್ಡಿ, ನಾಡಗೌಡ, ಅನ್ನದಾನರೆಡ್ಡಿ ಹಾಗೂ ಗ್ರಾಮಸ್ಥರು ಇದ್ದರು. ದ್ದರು.