ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಎಸ್‌ಡಬ್ಲ್ಯು ತ್ಯಾಜ್ಯ ರಾಶಿ ಕುಸಿತ: ನಾಲ್ಕೈದು ಕಾರ್ಮಿಕರು ಸಿಲುಕಿರುವ ಶಂಕೆ

Last Updated 12 ಏಪ್ರಿಲ್ 2022, 19:39 IST
ಅಕ್ಷರ ಗಾತ್ರ

ಬಳ್ಳಾರಿ: ತಾಲ್ಲೂಕಿನ ಕುಡತಿನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಪ್ರತಿಷ್ಠಿತ ಜೆಎಸ್‌ಡಬ್ಲ್ಯು ಉಕ್ಕು ಕಾರ್ಖಾನೆ ತ್ಯಾಜ್ಯ ಸಂಗ್ರಹಿಸುವ ಕೆರೆ ಬಂಡು ಸುಮಾರು ನೂರು ಅಡಿಗಳಷ್ಟು ಕುಸಿದು ಕಬ್ಬಿಣ ಆಯುವ ಕೆಲವು ಕೂಲಿ ಕಾರ್ಮಿಕರು ಅದರಡಿ ಸಿಲುಕಿದ್ದಾರೆ ಎನ್ನಲಾಗಿದೆ.

ಕೆರೆ ಬಂಡು ಹೇಗೆ ಕುಸಿಯಿತು. ಅದರಡಿಎಷ್ಟು ಜನ ಕೂಲಿ ಕಾರ್ಮಿಕರು ಸಿಲುಕಿದ್ದಾರೆ ಎನ್ನುವ ಕುರಿತು ಮಾಹಿತಿ ಸಿಕ್ಕಿಲ್ಲ. ನಾಲ್ಕು ಜೆಸಿಬಿಗಳು ಹಾಗೂ ಎರಡು ಪೊಕ್ಲೇನ್‌ಗಳು ತ್ಯಾಜ್ಯ ತೆಗೆದು ಅದರಡಿ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ಕಾರ್ಯಾಚರಣೆ ಆರಂಭಿಸಿವೆ. ಮಧ್ಯರಾತ್ರಿಯೂ ಕಾರ್ಯಾಚರಣೆ ಮುಂದುವರಿದಿತ್ತು.

ಘಟನೆ ಸ್ಥಳಕ್ಕೆ ಕುಡತಿನಿ ಠಾಣೆ ಪೊಲೀಸರು ಧಾವಿಸಿದ್ದು, ತ್ಯಾಜ್ಯದ ಅಡಿಯಲ್ಲಿ ಸಿಲುಕಿರಬಹುದಾದ ಕಾರ್ಮಿಕರ ರಕ್ಷಣೆಗೆ ಮುಂದಾಗಿದ್ದಾರೆ.

ಆಗಿದ್ದೇನು?: ಕಾರ್ಖಾನೆಯಲ್ಲಿ ಉಕ್ಕಿನ ಜೊತೆ ತ್ಯಾಜ್ಯವೂ (ಕಿಟ್ಟ) ಉತ್ಪಾದನೆ ಆಗುತ್ತದೆ‌. ಈ ತ್ಯಾಜ್ಯವನ್ನು ಸುತ್ತ ತಡೆಗೋಡೆ ನಿರ್ಮಿಸಿದ ಕೆರೆಯಂತಹ (ಡಂಪಿಂಗ್ ಯಾರ್ಡ್) ಸ್ಥಳದಲ್ಲಿ ಸಂಗ್ರಹಿಸಲಾಗುತ್ತದೆ. ಇದರಲ್ಲಿ ಕಬ್ಬಿಣದ ಚೂರುಗಳೂ ಸಿಗುವುದರಿಂದ ಅವುಗಳನ್ನು ಸಂಗ್ರಹಿಸಿ ಮಾರುವ ದೊಡ್ಡ ಜಾಲವೇ ಇದೆ. ಕಿಟ್ಟ ಜಾಲಾಡಿ ಕಬ್ಬಿಣ ಸಂಗ್ರಹಿಸುವ ಕಾರ್ಮಿಕರು ಜೀವ ಪಣಕ್ಕಿಟ್ಟು ಕೂಲಿಗಾಗಿ ದುಡಿಯುತ್ತಾರೆ.

ಈಚೆಗೆ ಕಿಟ್ಟದ ಉತ್ಪಾದನೆ ಹೆಚ್ಚಿದ್ದು, ಅದನ್ನು ಸಂಗ್ರಹಿಸುವ ಕೆರೆಯ ವ್ಯಾಪ್ತಿ ವಿಸ್ತರಿಸಲಾಗಿದೆ. ಅದೇ ರೀತಿಸುತ್ತಲಿನ ಬಂಡ್ ವಿಸ್ತರಿಸಲಾಗಿದೆ. ವಿಸ್ತರಿಸಿದ ಕೆರೆಯ ಬಂಡ್‌ ಅನ್ನು ಬಿಗಿಗೊಳಿಸದ ಕಾರಣ ಕುಸಿತವಾಗಿರಬಹುದು ಎಂಬುದು ಸ್ಥಳೀಯರ
ಅಭಿಪ್ರಾಯ.

ದೂರು ಕೊಡಲಾಗಿದೆ: ’ನಮ್ಮ ಉಪಕರಣಗಳನ್ನೇ ಬಳಸಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಡಂಪಿಂಗ್‌ ಯಾರ್ಡ್‌ ನಮಗೆ ಸೇರಿದ ಜಾಗ. ಕಬ್ಬಿಣ ಆಯುವ ಆಸೆಗಾಗಿ ಕೆಲವರು ಬರುತ್ತಾರೆ. ಜನರ ಅಕ್ರಮ ಪ್ರವೇಶಕ್ಕೆ ಕಡಿವಾಣ ಹಾಕುವ ಪ್ರಯತ್ನ ನಡೆದಿದೆ. ನಮ್ಮ ಸೆಕ್ಯುರಿಟಿ ಹಾಕಲಾಗಿದೆ. ಪೊಲೀಸರಿಗೂ ಹಲವು ಸಲ ದೂರು ನೀಡಲಾಗಿದೆ. ಆದರೂ ಜನ ಬರುವುದು ನಿಂತಿಲ್ಲ‘ ಎಂದು ಜೆಎಸ್‌ಡಬ್ಲ್ಯು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT