ಹೊಸಪೇಟೆ: ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತ, ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ರೈತ, ಕಾರ್ಮಿಕ ಐಕ್ಯ ಹೋರಾಟ ಸಮಿತಿ ಕರೆ ಕೊಟ್ಟಿರುವ ಬಂದ್ ಗೆ ಸೋಮವಾರ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಿಗ್ಗೆಯಿಂದಲೇ ಅಂಗಡಿ ಮುಗ್ಗಟ್ಟು, ಹೋಟೆಲ್ ಗಳು ಬಾಗಿಲು ತೆರೆದಿಲ್ಲ. ರೈತರು ತಡೆದಿದ್ದರಿಂದ ಬಸ್ ಸಂಚಾರ ಸ್ಥಗಿತಗೊಂಡಿದೆ. ಅನೇಕ ಜನ ಪ್ರಯಾಣಿಕರು ಬಸ್ ನಿರೀಕ್ಷೆಯಲ್ಲಿ ನಿಲ್ದಾಣದಲ್ಲೇ ಕಾದು ಕುಳಿತಿದ್ದರು.
25 ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ. ಬ್ಯಾಂಕ್, ಸರ್ಕಾರಿ ಕಚೇರಿಗಳು, ಪೆಟ್ರೋಲ್ ಬಂಕ್, ಆಸ್ಪತ್ರೆ, ಮೆಡಿಕಲ್ ಗಳು ಎಂದಿನಂತೆ ತೆರೆದಿದ್ದವು. ತರಕಾರಿ ಮಾರುಕಟ್ಟೆ ಕೂಡ ತೆರೆದಿತ್ತು. ಜನಸಂಚಾರ ವಿರಳವಾಗಿತ್ತು.