ಹೊಸಪೇಟೆ: ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಿಮಿತ್ತ ಪೊಲೀಸರು ಮಂಗಳವಾರ ಸಂಜೆ ನಗರದಲ್ಲಿ ಪಥ ಸಂಚಲನ ನಡೆಸಿದರು.
ಸ್ಥಳೀಯ ಪೊಲೀಸರೊಂದಿಗೆಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ, ಕೇಂದ್ರ ಅರೆಸೇನಾ ಪಡೆ ಯೋಧರು ಹೆಜ್ಜೆ ಹಾಕಿದರು.
ಮೂರು ಗೋರಿ ಪ್ರದೇಶದಿಂದ ಆರಂಭವಾದ ಪಥ ಸಂಚಲನ ಸಿದ್ದಲಿಂಗಪ್ಪ ಚೌಕಿ, ಮೀರ್ ಆಲಂ, ಮಹಾತ್ಮ ಗಾಂಧಿ ವೃತ್ತ, ಮೂರಂಗಡಿ ಮಸೀದಿ, ರಾಮ ಟಾಕೀಸ್, ಚಲುವಾದಿ ಕೇರಿ, ಏಳುಕೇರಿ, ನೇಕಾರ ಕಾಲೊನಿ ಮೂಲಕ ಹಾದು ಸಂಡೂರು ರಸ್ತೆ ಡಿ.ವೈ.ಎಸ್ಪಿ. ಕಚೇರಿ ಬಳಿ ಕೊನೆಗೊಂಡಿತು.
ಡಿ.ವೈ.ಎಸ್ಪಿ. ವಿ. ರಘುಕುಮಾರ ಮಾತನಾಡಿ, ‘ಚುನಾವಣೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಕಡ್ಡಾಯವಾಗಿ ಮತದಾನ ಮಾಡಬೇಕು. ಶಾಂತಿ, ಸುವ್ಯವಸ್ಥೆಯ ಹೊಣೆ ಪೊಲೀಸರು ಹೊತ್ತಿದ್ದಾರೆ. ಯಾವುದೇ ಭಯವಿಲ್ಲದೆ ಜನ ಬಂದು ಹಕ್ಕು ಚಲಾಯಿಸಬೇಕು. ಜನರಲ್ಲಿ ಧೈರ್ಯ ಮೂಡಿಸುವುದಕ್ಕಾಗಿಯೇ ಈ ಪಥ ಸಂಚಲನ ನಡೆಸಲಾಗಿದೆ’ ಎಂದು ಹೇಳಿದರು.