ಕೂಡ್ಲಿಗಿ: ತಾಲ್ಲೂಕಿನ ಗುಡೇಕೋಟೆ ಹೋಬಳಿಯಲ್ಲಿ ಶುಕ್ರವಾರ ಬೆಳಗಿನ ಜಾವ ಭಾರಿ ಮಳೆ ಸುರಿದಿದೆ. ಬೆಳಗಿನ ಜಾವ 4.30ಕ್ಕೆ ಆರಂಭವಾದ ಮಳೆ ಸುಮಾರು ಒಂದುವರೆ ತಾಸು ಸುರಿದಿದೆ.
ಸರ್ವೋದಯ, ಲಿಂಗನಹಳ್ಳಿ ತಾಂಡಾ, ಶ್ರೀಕಂಠಾಪುರ ತಾಂಡಾ, ಯರ್ರಬೊನಹಳ್ಳಿ, ಸಿಡೇಗಲ್ಲು ಸುತ್ತ ಮುತ್ತಲ ಪ್ರದೇಶಗಳಲ್ಲಿ ಹಳ್ಳಗಳು ತುಂಬಿ ಹರಿಯುತ್ತಿದ್ದು, ನೀರಿನ ರಭಸಕ್ಕೆ ಮೆಕ್ಕೆ ಜೋಳ, ಜೋಳ, ಶೇಂಗಾ. ಈರುಳ್ಳಿ ಬೆಳೆಗಳು ಹಾಳಾಗಿವೆ.
ಹೊಲಗಳ ಒಡ್ಡುಗಳು ಕೊಚ್ಚಿಕೊಂಡು ಹೋಗಿವೆ. ದಾಳಿಂಬೆ ತೋಟಗಳಲ್ಲಿ ನೀರುನಿಂತಿದ್ದು ಹನಿ ನೀರಾವರಿಗೆ ಹಾಕಿದ್ದ ಪೈಪ್ ಲೈನ್ ಕೂಡ ನೀರಿನ ಹೊಡೆತಕ್ಕೆ ಕಿತ್ತು ಹೋಗಿದೆ.
ರಾಜ ಎನ್ನುವವರ ಹೊಲದಲ್ಲಿ ಇತ್ತೀಚೆಗಷ್ಟೆ ನಾಟಿ ಮಾಡಿದ್ದ ಸುಮಾರು ಆರು ನೂರು ಪಪ್ಪಾಯಿ ಗಿಡಗಳು ಸಂಪೂರ್ಣ ನಾಶವಾಗಿವೆ. ಗುಡೇಕೋಟೆ ಕೆರೆಗೆ ಒಂದೇ ದಿನ ಅರ್ಧದಷ್ಟು ನೀರು ಬಂದಿದೆ.