ಬಳ್ಳಾರಿ: ತಂಗಿಯ ತಲೆಯ ಮೇಲೆ ಕೆರೆ ಬಂಡೆ ಎತ್ತಿಹಾಕಿ ಕೊಲೆ ಮಾಡಿದ ಅಪರಾಧಿಗೆ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.
ಸಿರುಗುಪ್ಪ ಪಟ್ಟಣದಲ್ಲಿ 2017ರ ಫೆಬ್ರುವರಿ 18ರಂದು ಈ ಘಟನೆ ನಡೆದಿತ್ತು. ಜೀವಾವಧಿ ಶಿಕ್ಷೆಗೊಳಗಾದ ನಾಗರಾಜ ತನ್ನ ತಾಯಿ ಮತ್ತು ತಂಗಿ ಶಕುಂತಲಾ ಜತೆ ಜಗಳ ತೆಗೆದು, ತಂಗಿಯನ್ನು ತಳ್ಳಿ ಆಕೆ ನೆಲಕ್ಕೆ ಬಿದ್ದಾಗ, ಮನೆಯ ಹೊರಗಿದ್ದ ಕೆರೆ ಬಂಡೆ ತಂದು ತಲೆ ಮೇಲೆ ಎತ್ತಿಹಾಕಿ ಕೊಲೆ ಮಾಡಿದ್ದ. ಯುವತಿ ತಲೆಯಿಂದ ಮಿದುಳು ಹೊರ ಬಂದಿತ್ತು. ತಕ್ಷಣ ಆಕೆಯನ್ನು ಸಿರುಗುಪ್ಪ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರೂ ಬದುಕುಳಿಯಲಿಲ್ಲ ಎಂದು ಪ್ರಾಸಿಕ್ಯೂಷನ್ ಅರೋಪಿಸಿತ್ತು.
ನಾಗರಾಜ ಸರಿಯಾಗಿ ಕೆಲಸಕ್ಕೆ ಹೋಗದೆ ಪತ್ನಿ ಜತೆ ಪದೇ ಪದೇ ಜಗಳವಾಡುತ್ತಿದ್ದ. ಇದರಿಂದ ಬೇಸತ್ತ ಪತ್ನಿ ತವರಿಗೆ ಮರಳಿದ್ದಳು. ಬಳಿಕ ತಾಯಿ, ತಂಗಿಯೊಂದಿಗೆ ಜಗಳವಾಡುತ್ತಿದ್ದ. ಘಟನೆ ನಡೆದ ದಿನವೂ ಜಗಳ ತೆಗೆದಿದ್ದ. ‘ ನೀನು ಸರಿಯಾಗಿ ಕೆಲಸಕ್ಕೆ ಹೋಗಿದ್ದರೆ ನಿನ್ನ ಪತ್ನಿ ಏಕೆ ತವರಿಗೆ ಹೋಗುತ್ತಿದ್ದಳು‘ ಎಂದು ಶಕುಂತಲಾ ಬೈದಿದ್ದಳು. ಇದರಿಂದ ಸಿಟ್ಟಿಗೆದ್ದ ನಾಗರಾಜ ಅವಳನ್ನು ಕೊಲೆ ಮಾಡಿದ್ದ ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು. ಈ ಘಟನೆ ಕುರಿತು ಪ್ರತ್ಯಕ್ಷದರ್ಶಿಗಳು ಸಾಕ್ಷ್ಯ ಹೇಳಿದ್ದರು.
ಕೊಲೆ ಪ್ರಕರಣದ ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಡಿ. ವಿನಯ್ ನಾಗರಾಜನಿಗೆ ಕೊಲೆ ಅಪರಾಧಕ್ಕೆ ಜೀವಾವಧಿ ಶಿಕ್ಷೆ, ₹ 20 ಸಾವಿರ ದಂಡ ಮತ್ತು ಐಪಿಸಿ ಸೆಕ್ಷನ್ 323ರ ಅಡಿ ಮಾಡಿದ ಅಪರಾಧಕ್ಕೆ ಮೂರು ತಿಂಗಳ ಸಾದಾ ಸಜೆ ವಿಧಿಸಿ ಆದೇಶಿಸಿದ್ದಾರೆ.
ದಂಡದ ಹಣದಲ್ಲಿ ಶೇ 70ರಷ್ಟನ್ನು ಮೃತಳ ತಾಯಿಗೆ, ಉಳಿದ ಶೇ 30ರಷ್ಟನ್ನು ಸರ್ಕಾರಕ್ಕೆ ಪಾವತಿಸಲು ನ್ಯಾಯಾಧೀಶರು ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ ಹಿಂದಿನ ಸರ್ಕಾರಿ ಅಭಿಯೋಜಕರಾಗಿದ್ದ ಲಕ್ಷ್ಮೀದೇವಿ ಪಾಟೀಲ್ ಸಾಕ್ಷಿಗಳ ವಿಚಾರಣೆ ನಡೆಸಿದ್ದರು. ಸರ್ಕಾರಿ ಅಭಿಯೋಜಕ ಶೇಖರಪ್ಪ ಪ್ರಾಸಿಕ್ಯೂಷನ್ ಪರವಾಗಿ ವಾದಿಸಿದ್ದರು. ಅಂದಿನ ಸಿರುಗುಪ್ಪ ಇನ್ಸ್ಪೆಕ್ಟರ್ ಎಂ. ನಾಗರೆಡ್ಡಿ ಪ್ರಕರಣದ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.