ಹೊಸಪೇಟೆ: ‘ನನಗೆ ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಕ್ಕಾಗಲೇ ನಾನು ಗೆದ್ದೆ. ಈಗ ಜನ ಗೆಲ್ಲಬೇಕಿದೆ’ ಎಂದು ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಮಹೇಶ ಲಂಬಾಣಿ ಹೇಳಿದರು.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಚುನಾವಣೆಯಲ್ಲಿ ಸೋತರೆ ಅದು ನನ್ನ ಸೋಲಲ್ಲ. ಅದು ಜನರ ಸೋಲು. ನಾನು ಯಾವುದೇ ಆಸೆ, ಆಮಿಷ ಒಡ್ಡುವುದಿಲ್ಲ. ನಾನು ಆಯ್ಕೆಯಾದರೆ ಅವರು ನನಗೆ ಕೇಳಬೇಕಿಲ್ಲ. ಆದೇಶ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಾರೆ’ ಎಂದರು.
‘ನಮ್ಮ ವ್ಯವಸ್ಥೆಯಲ್ಲಿಪ್ರಜೆಗಳು ಮತ ಹಾಕಲು ಸೀಮಿತರಾಗಿದ್ದಾರೆ. ಇಡೀ ವ್ಯವಸ್ಥೆಯ ಮೇಲೆ ಕೆಲವರೇ ನಿಯಂತ್ರಣ ಸಾಧಿಸಿದ್ದಾರೆ. ಅದು ಹೋಗಬೇಕು. ಸ್ವಚ್ಛ, ದಕ್ಷ, ಆಡಳಿತ ನಡೆಸುವವರನ್ನು ಆಯ್ಕೆ ಮಾಡಬೇಕು’ ಎಂದು ಮನವಿ ಮಾಡಿದರು.
‘ನಾನು ಸೇರಿದಂತೆ ಹಲವರು ಟಿಕೆಟ್ಗೆ ಅರ್ಜಿ ಹಾಕಿದ್ದೆವು. ಪರೀಕ್ಷೆ ನಡೆಸಿದ ನಂತರ ನನಗೆ ಟಿಕೆಟ್ ಕೊಟ್ಟಿದ್ದಾರೆ. ಈ ವ್ಯವಸ್ಥೆ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಬರಬೇಕು. ಅರ್ಹರಿಗೆ ಟಿಕೆಟ್ ಸಿಗಬೇಕು. ನಮ್ಮ ಪಕ್ಷದ ವಿಚಾರಧಾರೆಗಳಿಂದ ಆಕರ್ಷಿತರಾಗಿ ನಿತ್ಯ ಅನೇಕ ಜನ ಕರೆ ಮಾಡಿ ಬೆಂಬಲ ಸೂಚಿಸುತ್ತಿದ್ದಾರೆ’ ಎಂದು ಹೇಳಿದರು.