ಹೊಸಪೇಟೆ: ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ತೋಟಗಾರಿಕೆ ಮತ್ತು ಚರಿತ್ರೆ ವಿಭಾಗದಿಂದ ಗುರುವಾರ ಪರಿಸರ ದಿನಾಚರಣೆ ಹಾಗೂ ವನ ಮಹೋತ್ಸವ ಆಚರಿಸಲಾಯಿತು.
ಕುಲಪತಿ ಪ್ರೊ. ಸ.ಚಿ. ರಮೇಶ ಸಸಿಗೆ ನೀರೆರೆದು, ‘ಜನರ ಆಚಾರ –ವಿಚಾರ ಮತ್ತು ಸಂಪ್ರದಾಯಗಳು ಮೌಢ್ಯ ಅಲ್ಲ. ಗಿಡಮರಗಳನ್ನು ನೆಡುವ ಮೂಲಕ ಭೂಮಿಯನ್ನು ಭದ್ರಗೊಳಿಸಬೇಕು. ದೇಶದಾದ್ಯಂತ ಜನ ಸಂಕಟದಲ್ಲಿದ್ದಾರೆ. ಪ್ರಕೃತಿ ಮುನಿಸಿಕೊಂಡಿರುವುದರಿಂದ ಹೀಗಾಗಿದೆ’ ಎಂದರು.
‘ಮರಗಿಡಗಳ ಬಗ್ಗೆ ಜನಪದರು ತುಂಬಾ ಒಳ್ಳೆಯ ಅಭಿಪ್ರಾಯವನ್ನು ಹೊಂದಿದ್ದು, ಅವುಗಳಲ್ಲಿ ತಮ್ಮ ಇಷ್ಟ ದೇವತೆಗಳನ್ನು ಕಾಣುತ್ತಿದ್ದರು. ಆದರೆ, ನಂತರದ ಪೀಳಿಗೆಯವರು ಜಾಗತೀಕರಣ ಮತ್ತು ವೈಜ್ಞಾನಿಕತೆಯ ನೆಪವೊಡ್ಡಿ ಮರಗಿಡಗಳನ್ನು ನಾಶಪಡಿಸುವ ಮಟ್ಟಕ್ಕೆ ಇಳಿದಿದ್ದಾರೆ. ಮಲೆನಾಡಿನ ಪ್ರದೇಶದಲ್ಲಿ ತಿಂಗಳಾನುಗಟ್ಟಲೆ ಮಳೆ ಸುರಿದರೂ ಏನು ಆಗುತ್ತಿರಲಿಲ್ಲ. ಆದರೆ, ಈಗ ಮೂರು ದಿನ ಮಳೆ ಸುರಿದರೆ ಗುಡ್ಡ ಕುಸಿಯುವ ವಾತಾವರಣವನ್ನು ನಾವೆಲ್ಲ ನೋಡುತ್ತಿದ್ದೇವೆ. ಮಾನವನ ದುರಾಸೆಯಿಂದ ಇದೆಲ್ಲ ಆಗುತ್ತಿದೆ’ ಎಂದು ಹೇಳಿದರು.
ಕುಲಸಚಿವ ಎ.ಸುಬ್ಬಣ್ಣ ರೈ, ಚರಿತ್ರೆ ವಿಭಾಗದ ಮುಖ್ಯಸ್ಥ ಚಿನ್ನಸ್ವಾಮಿ ಸೋಸಲೆ, ಪ್ರಾಧ್ಯಾಪಕರಾದ ಟಿ.ಪಿ.ವಿಜಯ್, ವಿರೂಪಾಕ್ಷಿ ಪೂಜಾರಹಳ್ಳಿ, ಸಿ.ಆರ್.ಗೋವಿಂದರಾಜು, ಬಾದಾಮಿ ಶಿಲ್ಪ ಮತ್ತು ವರ್ಣ ಚಿತ್ರಕಲಾ ಕೇಂದ್ರ ಮುಖ್ಯಸ್ಥ ಎ.ಕೃಷ್ಣ ಕಟ್ಟಿ, ತೋಟಗಾರಿಕೆ ವಿಭಾಗದ ಮುಖ್ಯಸ್ಥ ಎಂ.ಎಂ.ಶಿವಪ್ರಕಾಶ್ ಇದ್ದರು.