ಹೊಸಪೇಟೆ: ಆಲ್ ಇಂಡಿಯಾ ಡೆಮೊಕ್ರಟಿಕ್ ಯುತ್ ಆರ್ಗನೈಜೇಶನ್ (ಎ.ಐ.ಡಿ.ವೈ.ಒ) ವತಿಯಿಂದ ಗುರುವಾರ ನಗರದ ಚಿತ್ತವಾಡ್ಗಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಂಡಿತ್ ರಾಮಪ್ರಸಾದ್ ಬಿಸ್ಮಿಲ್ಲಾ ಹಾಗೂ ಅಶ್ಫಾಖ್ ಉಲ್ಲಾ ಖಾನ್ ಕ್ರಾಂತಿಕಾರಿಗಳು ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದ ದಿನ ಆಚರಿಸಲಾಯಿತು.
ಪ್ರಾಧ್ಯಾಪಕಿ ಪ್ರಭಾವತಿ ಅವರು ಹುತಾತ್ಮರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ, ‘ರಾಮ ಪ್ರಸಾದ್, ಅಶ್ಫಾಖ್ ಅಂತಹವರ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಅವರ ಚಿಂತನೆ, ಆದರ್ಶಗಳು ಸದಾ ಅಮರವಾಗಿರಬೇಕು’ ಎಂದು ಹೇಳಿದರು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಎಚ್. ಯರ್ರಿಸ್ವಾಮಿ, ‘ದೇಶವನ್ನು ಧರ್ಮದ ಆಧಾರದ ಮೇಲೆ ಒಡೆದು ಆಳುವ ನೀತಿಯನ್ನು ಪ್ರತಿಪಾದಿಸುತ್ತಿದ್ದ ರೌಲತ್ ಕಾಯ್ದೆಯನ್ನು ವಿರೋಧಿಸಲು ಜಲಿಯನ್ ವಾಲಾಬಾಗ್ ಮೈದಾನದಲ್ಲಿ ಸೇರಿದ್ದ ಅಪಾರ ಜನಸಮೂಹದ ಮೇಲೆ ಬ್ರೀಟಿಷ್ ಸರ್ಕಾರ ಹತ್ಯಾಕಾಂಡ ನಡೆಸಿತ್ತು. ಅದು ದೇಶದ ಯುವಜನರನ್ನು ಬಡಿದೆಬ್ಬಿಸಿತು. ಆಗ ವಿದ್ಯಾರ್ಥಿಗಳಾಗಿದ್ದ ಬಿಸ್ಮಿಲ್ಲಾ ಹಾಗೂ ಅಶ್ಫಾಖ್ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದರು’ ಎಂದು ತಿಳಿಸಿದರು.
ಸಂಘಟನೆಯ ಜಿಲ್ಲಾ ಸಂಚಾಲಕ ಎನ್.ಎಲ್.ಪಂಪಾಪತಿ, ಅಭಿಷೇಕ್ ಕಾಳೆ, ಕಲ್ಮೇಶ್ ಗುದಿಗೇನವರ್, ಹುಲುಗಪ್ಪ, ಜೆ.ಎಚ್.ನಾಗರಾಜ್, ಅಂಜಿನಪ್ಪ ಇದ್ದರು.