ತಮ್ಮನ್ನು ಭೇಟಿಯಾದ ‘ಪ್ರಜಾವಾಣಿ’ ಪ್ರತಿನಿಧಿ ಮುಂದೆ ತಮ್ಮ ವ್ಯಥೆಯನ್ನು ಹಂಚಿಕೊಂಡಿರುವ ರಾಮು, ‘ನನಗೆ ನಾಲ್ವರು ಪುತ್ರಿಯರು, ಒಬ್ಬ ಪುತ್ರ ಸೇರಿ ಐವರು ಮಕ್ಕಳು. 8 ತಿಂಗಳ ಹಿಂದೆ ಮಗನಿಗೆ ಟೈಫಾಯ್ಡ್, ಮಲೇರಿಯಾದಿಂದ ಆರೋಗ್ಯ ತೀವ್ರ ಹದಗೆಟ್ಟಿತ್ತು. ಕಲಬುರ್ಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದೆ. 3 ತಿಂಗಳವರೆಗೆ ಆಸ್ಪತ್ರೆಗಳಿಗೆ ತಿರುಗಿ ₹ 2 ಲಕ್ಷ ಸಾಲ ಮಾಡಿ ಮಗನನ್ನು ಉಳಿಸಿಕೊಂಡೆ. ಆಸ್ತಿ ಮಾರಿ ಸಾಲ ತೀರಿಸಬೇಕೆಂದರೆ ಒಂದು ಗುಂಟೆ ಜಮೀನೂ ಇಲ್ಲ. ತಾಂಡಾದಲ್ಲಿನ ಒಂದು ಕೋಣೆಯ ಮನೆಯನ್ನು ಮಾರೋಣವೆಂದರೆ ₹ 20 ಸಾವಿರಕ್ಕೂ ಕೇಳೋರಿಲ್ಲ. ನಿರಂತರ ಕೆಲಸವಿಲ್ಲ. ಸಾಲ ಮುಟ್ಟಿಸುವುದಿರಲಿ ಅನ್ನಕ್ಕೂ ಗತಿ ಇಲ್ಲದಂತಾಗಿತ್ತು. ಆಪತ್ತಿನ ಕಾಲದಲ್ಲಿ ಸಾಲ ಕೊಟ್ಟೋರಿಗೆ ಮರಳಿಸಿದಿದ್ದರೆ ಭಗವಂತ ಮೆಚ್ಚುವುದಿಲ್ಲ. ಇಬ್ಬರು ಮಕ್ಕಳನ್ನು ತಾಯಿ ಬಳಿ ಊರಲ್ಲೇ ಇರಿಸಿ ಮಾರ್ಚ್ ಮೊದಲ ವಾರದಲ್ಲಿ ಪತ್ನಿ ಮೂವರು ಮಕ್ಕಳೊಂದಿಗೆ ಮುಂಬೈಗೆ ತೆರಳಿದೆ’.