‘ಅಪರಾಧಿಗೆ ವರವಾದ ಪೊಲೀಸರ ನಿರ್ಲಕ್ಷ್ಯ’ (ಪ್ರ.ವಾ., ಮಾ. 4) ಎಂಬ ಲೇಖನದಲ್ಲಿ ಉಲ್ಲೇಖಿಸಿರುವ ಮೊಕದ್ದಮೆಯಲ್ಲಿ ಆರೋಪಿಯೇ ನಿರ್ದಾಕ್ಷಿಣ್ಯ, ಹೇಯ, ಬರ್ಬರ ಕೊಲೆ ಮಾಡಿದ್ದಾನೆ ಎಂಬ ಸತ್ಯ ಗೊತ್ತಿದ್ದೂ ಹಸ್ಮನ್ ಪಾಷ ಅವರು ಅಪರಾಧಿಯನ್ನು ರಕ್ಷಿಸಿದ್ದು ಏಕೆ?
ಪೊಲೀಸರದ್ದಾದರೆ ನಿರ್ಲಕ್ಷ್ಯ, ವಕೀಲರಿಗಾದರೆ ವೃತ್ತಿಧರ್ಮ! ರಾಮ್ ಜೇಠ್ಮಲಾನಿಯವರು ದಾವೂದ್ ಇಬ್ರಾಹಿಂನಂಥ ಘನಘೋರ ಅಪರಾಧಿಯ ಪರವಾಗಿ ವಾದಿಸಬಹುದು. ಇದು ಬೌದ್ಧಿಕ ವ್ಯಭಿಚಾರ ಅಲ್ಲವೇ? ಆತ್ಮಸಾಕ್ಷಿ ಅವರನ್ನು ಚುಚ್ಚುವುದಿಲ್ಲವೇ? ಪೊಲೀಸರ ಅಥವಾ ಇನ್ನಾವುದೇ ಅಧಿಕಾರಿಗಳ ನಿರ್ಲಕ್ಷ್ಯಗಳೇ ವಕೀಲರ ಯಶಸ್ಸಿನಲ್ಲಿ ಪ್ರಧಾನ ಪಾತ್ರ ವಹಿಸುವವೇ? ಇದೇ ನ್ಯಾಯವೇ?
ನನಗೆ ಮತ್ತೊಂದು ಸಂಶಯ. ಇಂಥ ವಕೀಲರ ಲೇಖನಗಳನ್ನು ನ್ಯಾಯಮೂರ್ತಿಗಳು ಗಮನಿಸುವುದಿಲ್ಲವೇ? ಹಸ್ಮತ್ ಪಾಷ ಓರ್ವ ಹೈಕೋರ್ಟ್ ನ್ಯಾಯಮೂರ್ತಿಗಳ ಹೆಸರನ್ನೇ ಉಲ್ಲೇಖಿಸಿದ್ದಾರೆ. ಇದು ನ್ಯಾಯಾಂಗ ದುರ್ವರ್ತನೆ ಅಲ್ಲವೇ?