ಹೊಸಪೇಟೆ: ರೈತ ಸಂಘಟನೆಗಳಿಂದ ಶನಿವಾರ ನಗರದಲ್ಲಿ ರೈತ ನಾಯಕ ಪ್ರೊಫೆಸರ್ ನಂಜುಂಡಸ್ವಾಮಿಯವರ 85ನೇ ಜನ್ಮದಿನ ಆಚರಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್ ಬಣ)
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್ ಅವರು ನಂಜುಂಡಸ್ವಾಮಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಬಳಿಕ ಮಾತನಾಡಿ, ‘ನಂಜುಂಡಸ್ವಾಮಿಯವರು ರೈತರ ಏಳಿಗೆಗಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದರು. ದೇಶಕಂಡ ಅಪ್ರತಿಮ ರೈತ ಹೋರಾಟಗಾರ ಅವರಾಗಿದ್ದರು’ ಎಂದು ನೆನೆದರು.
‘ಅಂದೇ ನಂಜುಂಡಸ್ವಾಮಿಯವರು ಕೃಷಿಯಲ್ಲಿ ವಿದೇಶಿ ಬಂಡವಾಳ ಹೂಡಿಕೆ, ರೈತರ ಜಮೀನು ಅನ್ಯ ಉದ್ದೇಶಕ್ಕಾಗಿ ಪರಭಾರೆ ಮಾಡುವುದನ್ನು ವಿರೋಧಿಸಿದ್ದರು. ಕೃಷಿ ಕಾಯ್ದೆ ವಿರೋಧಿ ರೈತರು ಹಗಲಿರುಳು ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸದಿರುವುದು ದುರದೃಷ್ಟಕರ’ ಎಂದರು.
ತಾಲ್ಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ ಮಾತನಾಡಿ, ‘ನಂಜುಂಡಸ್ವಾಮಿಯವರು ರೈತರಿಗೆ ಪ್ರೇರಕ ಶಕ್ತಿಯಾಗಿದ್ದರು. ರೈತರ ಕಷ್ಟಕ್ಕೆ ಸ್ಪಂದಿಸಿ ನ್ಯಾಯ ದೊರಕಿಸಿಕೊಡುತ್ತಿದ್ದರು’ ಎಂದರು.
ಸಂಘದ ಉಪಾಧ್ಯಕ್ಷ ಜೆ.ರಾಘವೇಂದ್ರ, ಗೌರವ ಅಧ್ಯಕ್ಷ ರೇವಣಸಿದ್ದಪ್ಪ, ಮುಖಂಡರಾದ ಹೇಮರೆಡ್ಡಿ, ಎಚ್.ಜಿ.ಮಲ್ಲಿಕಾರ್ಜುನ, ಎಲ್.ಎಸ್.ರುದ್ರಪ್ಪ, ಅಯ್ಯಣ್ಣ, ನಾಗೇಶ್, ರಮೇಶ್, ನಗರ ಘಟಕ ಅಧ್ಯಕ್ಷ ಟಿ.ನಾಗರಾಜ, ಉಪಾಧ್ಯಕ್ಷ ರಾಮಾಂಜಿನಿ, ಕಮಲಾಪುರ ನಗರ ಘಟಕದ ಅಧ್ಯಕ್ಷ ನಾಗರಾಜ, ನಲ್ಲಾಪುರ ಘಟಕದ ಅಧ್ಯಕ್ಷ ಹನುಮಂತಪ್ಪ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಎನ್. ಯಲ್ಲಾಲಿಂಗ, ಸಿಐಟಿಯು ಜಿಲ್ಲಾ ಅಧ್ಯಕ್ಷ ಭಾಸ್ಕರ್ ರೆಡ್ಡಿ ಇದ್ದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ:
ಸೇನೆಯಿಂದ ನಗರದ ಅಮರಾವತಿ ಅತಿಥಿ ಗೃಹದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಗೋಣಿಬಸಪ್ಪ ಅವರು ನಂಜುಂಡಸ್ವಾಮಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ‘ರೈತರ ಸಂಘ, ಹೋರಾಟಗಳಿಗೆ ಮುನ್ನುಡಿ ಹಾಡಿದವರು ನಂಜುಂಡಸ್ವಾಮಿಯವರು. ಜೀವನದುದ್ದಕ್ಕೂ ರೈತರಿಗಾಗಿ ಹೋರಾಡಿದರು’ ಎಂದು ನೆನೆದರು.
ಮುಖಂಡರಾದ ಎಂ.ಎಲ್.ಕೆ. ನಾಯ್ಡು, ಸಿದ್ದನಗೌಡ, ಸಂಗನಕಲ್ಲು ಕೃಷ್ಣ , ಜೆ. ನಾಗರಾಜ್, ಅಂಬಣ್ಣ, ಎ.ಕುಮಾರಸ್ವಾಮಿ, ಕೆ.ಕೃಷ್ಣ, ದಿವಾಕರ್, ಜೆ. ಸಿದ್ದರಾಮನಗೌಡ, ಗಂಗಾ ಧಾರವಾಡಕರ್, ಗೌಸಿಯಾ ಖಾನ್, ಮಾಬುಸಾಬ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.