ದಾವಣಗೆರೆ: ‘ಪ್ರತ್ಯೇಕ ಧರ್ಮದ ಬಗ್ಗೆ ಯಾರೂ ಆತಂಕ ಪಡುವುದು ಬೇಡ. ವೀರಶೈವರು ಲಿಂಗಾಯತರು ಒಂದೇ ಎಂಬುದನ್ನು ಹಿಂದಿನಿಂದಲೂ ಪ್ರತಿಪಾದಿಸುತ್ತಾ ಬಂದಿರುವ ನಮ್ಮ ಮೇಲೆ ವಿಶ್ವಾಸ ಇಡಬೇಕು. ನಾವು ನುಡಿದಂತೆ ನಡೆಯುವವರು’ ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು.
ನಗರದ ಮಲ್ಲಿಕಾರ್ಜುನ ಟವರ್ ಸಭಾಂಗಣದಲ್ಲಿ ಬುಧವಾರ ವೀರಶೈವ ಜಂಗಮ ಸಮಾಜ ಹಾಗೂ ವೀರಮಹೇಶ್ವರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
‘ಈ ಹಿಂದೆ ಹಲವು ಸ್ವಾಮೀಜಿಗಳು ನಮ್ಮನ್ನು ಬೆಂಬಲಿಸುವಂತೆ ಬಹಿರಂಗವಾಗಿ ಕರೆ ನೀಡುತ್ತಿದ್ದರು. ಆದರೆ, ಕಾಲ ಬದಲಾಗಿದ್ದು ಜನರು ಸಹ ಬುದ್ಧಿವಂತರಾಗಿದ್ದಾರೆ. ಈ ಚುನಾವಣೆಯಲ್ಲಿ ನಮ್ಮನ್ನು ಬೆಂಬಲಿಸುವುದರ ಜತೆಗೆ ಎದುರಾಳಿಗಳ ಠೇವಣೆ ಸಿಗದಂತೆ ಮಾಡ
ಬೇಕು’ ಎಂದು ಮನವಿ ಮಾಡಿದರು.
ಎಸ್.ಎಸ್. ಮಲ್ಲಿಕಾರ್ಜುನ ಅವರು, ‘ಹಿಂದಿನಿಂದಲೂ ವೀರಶೈವ ಜಂಗಮ ಸಮುದಾಯದವರು ನಮ್ಮನ್ನು ಬೆಂಬಲಿಸುತ್ತಾ ಬಂದಿದ್ದು, ಈ ಬಾರಿಯು ಪ್ರತಿಯೊಬ್ಬರೂ ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮತದಾರರ ಮನವೊಲಿಸಬೇಕು’ ಎಂದು ಮನವಿ ಮಾಡಿದರು.
ಬಾ.ಮ. ಬಸವರಾಜಯ್ಯ ಮಾತ ನಾಡಿ, ‘ಶಾಮನೂರು ಶಿವಶಂಕರಪ್ಪ ಹಾಗೂ ಎಸ್. ಎಸ್.ಮಲ್ಲಿಕಾರ್ಜುನ ಅವರು ಎಲಾ ಸಮುದಾಯಗಳ ಪ್ರಗತಿಗೆ ಸಹಕರಿಸಿದ್ದಾರೆ. ಜತೆಗೆ ನಗರದ ಸರ್ವತೋಮುಖ ಅಭಿವೃದ್ಧಿಯನ್ನೂ ಮಾಡಿದ್ದಾರೆ’ ಎಂದು ಹೇಳಿದರು. ಎನ್.ಎಂ..ಜೆ.ಬಿ. ಮುರುಗೇಶ್, ಆವರಗೊಳ್ಳ ವೀರಯ್ಯ, ಬನ್ನಯ್ಯ ಸ್ವಾಮಿ, ಎನ್.ಜೆ. ಗುರುಸಿದ್ದಯ್ಯ ಅವರೂ ಮಾತನಾಡಿದರು.