ಬಳ್ಳಾರಿ:ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನೂತನ ಕುಲಪತಿ ಪ್ರೊ.ಸಿದ್ದು ಅಲಗೂರ್ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಹಂಗಾಮಿ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ ರೆಡ್ಡಿ ಪುಷ್ಪಗುಚ್ಛ ನೀಡಿ ಪ್ರೊ.ಸಿದ್ದು ಅವರನ್ನು ಸ್ವಾಗತಿಸಿದರು.
ಮೌಲ್ಯಮಾಪನ ಕುಲಸಚಿವ ಪ್ರೊ. ಕೆ.ರಮೇಶ್, ಸಿಂಡಿಕೇಟ್ ಸದಸ್ಯರಾದ ದೊಡ್ಡಬಸವನಗೌಡ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ನರಸಿಂಹ ರಾಯಚೂರು, ರಾಜು ಚಿಕ್ಕನಗೌಡರ, ಮಾಜಿ ಸದಸ್ಯರಾದ ವಿಜಯ್ ಕುಚನೂರೆ, ಕಿರಣ್ ಉಪಸ್ಥಿತರಿದ್ದರು.
ಪರಿಚಯ: ಬಾಗಲಕೋಟೆ ಜಿಲ್ಲೆಯ ತೇರದಾಳದವರಾದ ಪ್ರೊ. ಸಿದ್ದು ಅಲಗೂರು, ಮೈಸೂರು ವಿಶ್ವವಿದ್ಯಾಲಯಲ್ಲಿ ಎಂಜಿನಿಯರಿಂಗ್ ಪದವಿ, ಅಲಹಾಬಾದ್ನ ಮೋತಿಲಾಲ್ ನೆಹರು ರಾಷ್ಟ್ರಿಯ ತಾಂತ್ರಿಕ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಧಾರವಾಡ ಎಸ್ಡಿಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಉದ್ಯೋಗ ಆರಂಭಿಸಿದ ಅವರು, ಹುಬ್ಬಳ್ಳಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಕಾಲೇಜುಗಳಲ್ಲೂ ಕಾರ್ಯನಿರ್ವಹಿಸಿದ್ದಾರೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ನೇಮಕಗೊಂಡು, ಬಳಿಕ ಕುಲಸಚಿವರಾಗಿದ್ದರು.