ಹೊಸಪೇಟೆ (ವಿಜಯನಗರ): ‘ಸಂಪರ್ಕ ಮತ್ತು ಸುದ್ದಿ ಮೂಲಗಳೇ ಪತ್ರಕರ್ತರ ಪ್ರಮುಖ ಅಸ್ತ್ರ’ ಎಂದು ಹಿರಿಯ ಪತ್ರಕರ್ತ ಶಶಿಧರ್ ಮೇಟಿ ತಿಳಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಪತ್ರಿಕಾ ದಿನಾಚರಣೆ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ‘ಮಾಧ್ಯಮಗಳಲ್ಲಿ ಸುದ್ದಿ ಮೂಲಗಳ ಗೌಪ್ಯತೆ ಮತ್ತು ಸವಾಲುಗಳು’ ಕುರಿತ ಗೋಷ್ಠಿಯಲ್ಲಿ ಉಪನ್ಯಾಸ ನೀಡಿದರು.
‘ಪತ್ರಿಕೋದ್ಯಮದಲ್ಲಿ ಯಶಸ್ವಿ ಪತ್ರಕರ್ತರಾಗಬೇಕಾದರೆ ಸುದ್ದಿ ಮೂಲಗಳು, ಸಂಪರ್ಕ ಅತ್ಯಗತ್ಯ. ಇಲ್ಲವಾದರೆ ಪತ್ರಕರ್ತ ಯಶಸ್ವಿಯಾಗಲು ಸಾಧ್ಯವಿಲ್ಲ. ಸುದ್ದಿ ಮೂಲಗಳ ಗೌಪ್ಯತೆ ಕಾಪಾಡುವುದು ಕೂಡ ಪತ್ರಕರ್ತನ ಧರ್ಮ’ ಎಂದು ಹೇಳಿದರು ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ ಮಾತನಾಡಿ, ಮಂಗಳೂರು ಸಮಾಚಾರ ಪತ್ರಿಕೆಯಿಂದ ಆರಂಭವಾದ ಕನ್ನಡ ಪತ್ರಿಕೋದ್ಯಮ ಹಲವಾರು ಸವಾಲುಗಳ ನಡುವೆಯೂ ಇಂದು ದೊಡ್ಡ ಮಟ್ಟದಲ್ಲಿ ಬೆಳದು ನಿಂತಿದೆ. ಕನ್ನಡ ಪತ್ರಿಕೋದ್ಯಮ ಇಂದು ವಿವಿಧ ಮಜಲುಗಳಲ್ಲಿ ಗುರುತಿಸಿಕೊಂಡಿರುವುದು ಗಮನಾರ್ಹ ಬೆಳವಣಿಗೆ ಎಂದರು.
ವಿಭಾಗದ ಮುಖ್ಯಸ್ಥ ಪ್ರೊ. ಎಸ್.ವೈ. ಸೋಮಶೇಖರ್, ಪ್ರಾಧ್ಯಾಪಕ ಲೋಕೇಶ್ ಎಸ್.ಕೆ., ಸಂಶೋಧನಾ ವಿದ್ಯಾರ್ಥಿಗಳಾದ ಶಿವನಗೌಡ ಮಾಡಗಿ, ಮಂಜುಳಾ, ಈರಣ್ಣ ಹೊಸ ಗೌಡರ್ ಇದ್ದರು.