ಹೊಸಪೇಟೆ: ‘ನೀತಿ’ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತಾಭ್ ಕಾಂತ್ ಅವರು ಕುಟುಂಬ ಸಮೇತ ಭಾನುವಾರ ಹಂಪಿಗೆ ಭೇಟಿ ನೀಡಿದರು.
ಬೆಳಿಗ್ಗೆ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ವಿರೂಪಾಕ್ಷನಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅಲ್ಲಿಯೇ ಇರುವ ಪಂಪಾಂಬಿಕೆ, ಭುವನೇಶ್ವರಿ ದೇವಿಯ ದರ್ಶನ ಪಡೆದರು.
ವಿಜಯ ವಿಠಲ ದೇವಸ್ಥಾನಕ್ಕೆ ಭೇಟಿ ಕೊಟ್ಟು ಅಲ್ಲಿನ ಸಪ್ತಸ್ವರ ಮಂಟಪ, ಕಲ್ಲಿನ ರಥ ಹಾಗೂ ಸುಂದರ ವಾಸ್ತುಶಿಲ್ಪ ಕಂಡು ಮನಸೋತರು. ಬಳಿಕ ಗಜಶಾಲೆ, ಕಮಲ ಮಹಲ್, ರಾಣಿ ಸ್ನಾನಗೃಹ, ಮಹಾನವಮಿ ದಿಬ್ಬ, ಸಾಸಿವೆಕಾಳು ಗಣಪ, ಕಡಲೆಕಾಳು ಗಣೇಶ, ಹೇಮಕೂಟ ನೋಡಿದರು.
ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಹಂಪಿ ವೃತ್ತದ ಡೆಪ್ಯುಟಿ ಸೂಪರಿಟೆಂಡೆಂಟ್ ಪಿ. ಕಾಳಿಮುತ್ತು, ಸಿಬ್ಬಂದಿ ಸೋಮ್ಲಾ ನಾಯಕ, ಸುನೀಲ್ ಕುಮಾರ, ಎಂ.ಸಿ.ಎಚ್.ಆರ್. ದೇಸಾಯಿ, ಕೆ. ರವಿಕುಮಾರ್ ಇದ್ದರು.