ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಹೇರಾ ಶೇಖ್‌ ಮತ್ತೆ ಚಂಚಲಗುಡ ಜೈಲಿಗೆ

ಹೀರಾ ಸಮೂಹ ಸಂಸ್ಥೆಯಲ್ಲಿ ಹೂಡಿಕೆ ಮಾಡಿದವರಿಗೆ ವಂಚನೆಯ ಆರೋಪ
Last Updated 12 ಜುಲೈ 2019, 13:54 IST
ಅಕ್ಷರ ಗಾತ್ರ

ಹೊಸಪೇಟೆ: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ದಿನದ ಮಟ್ಟಿಗೆ ಪೊಲೀಸ್‌ ಕಸ್ಟಡಿಯೊಳಗಿದ್ದ ಹೀರಾ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ನೌಹೇರಾ ಶೇಖ್‌ ಅವರನ್ನು ಶುಕ್ರವಾರ ಪುನಃ ಹೈದರಾಬಾದ್‌ನ ಚಂಚಲಗುಡ ಜೈಲಿಗೆ ಪೊಲೀಸರು ಕರೆದೊಯ್ದರು.

ನಗರದ ಕಂಚಗಾರಪೇಟೆಯ ಬಳ್ಳಾರಿ ಬಾಷಾ ಹಾಗೂ ಅವರ ಸಂಬಂಧಿಕರು ಹೀರಾ ಸಮೂಹ ಸಂಸ್ಥೆಯಲ್ಲಿ ₹45 ಲಕ್ಷ ಹೂಡಿಕೆ ಮಾಡಿದ್ದರು. ವಂಚಿಸಿರುವುದು ಗೊತ್ತಾಗುತ್ತಿದ್ದಂತೆ ಬಾಷಾ ಅವರು 2018ರ ನವೆಂಬರ್‌ 25ರಂದು ಇಲ್ಲಿನ ಪಟ್ಟಣ ಠಾಣೆಯಲ್ಲಿ ನೌಹೇರಾ ವಿರುದ್ಧ ದೂರು ದಾಖಲಿಸಿದ್ದರು. ಪ್ರಕರಣದ ವಿಚಾರಣೆ ಸಂಬಂಧ ಶೇಖ್‌ ಅವರನ್ನು ಗುರುವಾರ ಇಲ್ಲಿನ ಪ್ರಧಾನ ಸಿವಿಲ್‌ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಪೂರ್ಣಿಮಾ ಯಾದವ್‌, ದಿನದ ಮಟ್ಟಿಗೆ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದ್ದರು. ಪೊಲೀಸರು ಶುಕ್ರವಾರ ಸಂಜೆ ವಿಚಾರಣೆ ಪೂರ್ಣಗೊಳಿಸಿ, ನ್ಯಾಯಾಧೀಶರ ಎದುರು ಪ್ರಸ್ತುತಪಡಿಸಿದ ಬಳಿಕ ಹೈದರಾಬಾದ್‌ಗೆ ಕರೆದೊಯ್ದರು.

‘ಚಾರ್ಜ್‌ಶೀಟ್‌ ಸಲ್ಲಿಸಿದ ನಂತರ ಮತ್ತೆ ವಿಚಾರಣೆ ನಡೆಯಲಿದೆ. ಅಲ್ಲಿಯವರೆಗೆ ಶೇಖ್‌ ಅವರು ಚಂಚಲಗುಡ ಜೈಲಿನಲ್ಲೇ ಇರಲಿದ್ದಾರೆ. ಒಟ್ಟು ₹5 ಸಾವಿರ ಕೋಟಿ ವಂಚನೆ ಪ್ರಕರಣ ಸಂಬಂಧ ಅವರನ್ನು ಹೈದರಾಬಾದ್‌ ಪೊಲೀಸರು ಬಂಧಿಸಿದ್ದಾರೆ. ನಗರದ ಬಳ್ಳಾರಿ ಬಾಷಾ ಸೇರಿದಂತೆ ಕೆಲವರು ಮೋಸ ಹೋಗಿದ್ದಾರೆ. ಆ ಪ್ರಕರಣದ ವಿಚಾರಣೆಗಾಗಿ ಇಲ್ಲಿಗೆ ಕರೆತರಲಾಗಿತ್ತು. ನ್ಯಾಯಾಧೀಶರ ಸೂಚನೆ ಮೇರೆಗೆ ಹೈದರಾಬಾದ್‌ಗೆ ಕರೆದೊಯ್ಯಲಾಗುತ್ತಿದೆ’ ಎಂದು ಪಟ್ಟಣ ಠಾಣೆ ಸಿ.ಪಿ.ಐ. ಪ್ರಸಾದ್‌ ಗೋಖಲೆ ‘ಪ್ರಜಾವಾಣಿ’ಗೆ ತಿಳಿಸಿದರು.

ನೌಹೇರಾ ಪರವಾಗಿ ವಕೀಲ ಮೊಹಮ್ಮದ್‌ ಗೌಸ್‌, ಸರ್ಕಾರಿ ಅಭಿಯೋಜಕರಾಗಿ ಗೀತಾ ಮಿರಜಕರ್‌ ನ್ಯಾಯಾಲಯದಲ್ಲಿ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT