ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಮಸಾಲಿ ಶ್ರೀಗಳ ಪಾದಯಾತ್ರೆಗೆ ಇಟ್ಟಿಗಿಯಲ್ಲಿ ಭವ್ಯ ಸ್ವಾಗತ

ಮಾಡು ಇಲ್ಲವೇ ಮಡಿ ಹೋರಾಟ
Last Updated 25 ಜನವರಿ 2021, 5:05 IST
ಅಕ್ಷರ ಗಾತ್ರ

ಹೂವಿನಹಡಗಲಿ: ‘2ಎ ಮೀಸಲಾತಿಗಾಗಿ ಲಿಂಗಾಯತ ಪಂಚಮಸಾಲಿ ಸಮುದಾಯ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಇಳಿದಿದೆ. ಪಾದಯಾತ್ರೆ ಮಧ್ಯ ಕರ್ನಾಟಕ ಪ್ರವೇಶಿಸುವ ವೇಳೆಗೆ ಸರ್ಕಾರ ಮೀಸಲಾತಿ ಘೋಷಿಸಬೇಕು. ವಿಳಂಬ ಮಾಡಿದರೆ ನಮ್ಮ ಹೋರಾಟದ ಸ್ವರೂಪ ಬದಲಿಸಬೇಕಾಗುತ್ತದೆ’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಪೀಠಾಧಿಪತಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದರು.

ಪಂಚಲಕ್ಷ ಹೆಜ್ಜೆಗಳ ಪಾದಯಾತ್ರೆ ಮೂಲಕ ಭಾನುವಾರ ತಾಲ್ಲೂಕಿನ ಇಟ್ಟಿಗಿ ಗ್ರಾಮಕ್ಕೆ ಆಗಮಿಸಿರುವ ಅವರು ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದರು.

‘ಕೃಷಿಯನ್ನೇ ನಂಬಿರುವ ಪಂಚಮಸಾಲಿ ಸಮುದಾಯ 2ಎ ಮೀಸಲಾತಿಗೆ ಅರ್ಹವಾಗಿದೆ. ಉತ್ತರ ಕರ್ನಾಟಕದ ಬಹುಸಂಖ್ಯಾತ ಪಂಚಮಸಾಲಿ ಸಮಾಜ ಬಿಜೆಪಿ ಬೆಂಬಲಕ್ಕೆ ನಿಂತಿದ್ದರಿಂದ ಇಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ಮೀಸಲಾತಿ ನೀಡಿ ಸಮಾಜದ ಋಣ ತೀರಿಸಿದರೆ ಅವರ ಹೆಸರು ಅಜರಾಮರವಾಗುತ್ತದೆ’ ಎಂದರು.

28 ರಂದು ಪಾದಯಾತ್ರೆ ಹರಿಹರ ತಲುಪಲಿದೆ. ಮಧ್ಯ ಕರ್ನಾಟಕದಲ್ಲಿ ಜರುಗುವ ಐತಿಹಾಸಿಕ ಜನಜಾಗೃತಿ ಸಮಾವೇಶದಲ್ಲಿ ಸಮಾಜ ಪ್ರತಿನಿಧಿಸುವ ಎಲ್ಲ ಶಾಸಕರು, ಸಂಸದರು ಭಾಗವಹಿಸಿ ಹಕ್ಕೊತ್ತಾಯ ಮಂಡಿಸಲಿದ್ದಾರೆ. ವಿಧಾನಸೌಧ ಮುತ್ತಿಗೆ ಹಾಕುವ ದಿನಾಂಕವನ್ನು ಅಂದೇ ಪ್ರಕಟಿಸಲಿದ್ದೇವೆ. ಮಹಿಳೆಯರು ಕೃಷಿ ಪರಿಕರ ಹಿಡಿದು ವಿಧಾನಸೌಧದ ಎದುರು ಧರಣಿ ನಡೆಸಲಿದ್ದಾರೆ. ಸಮಾಜ ಬಾಂಧವರು ಬಾರುಕೋಲು ಚಳವಳಿ ನಡೆಸಲಿದ್ದಾರೆ ಎಂದು ಹೇಳಿದರು.

‘ಸಾಂವಿಧಾನಿಕ ಮೀಸಲಾತಿ ಪಡೆಯಲು ನಾವು ಬೀದಿಗಿಳಿದಿರುವುದು ಸರ್ಕಾರಕ್ಕೆ ಅವಮಾನವಾಗಿದ್ದರೆ, ನಮ್ಮವರ ವಿರುದ್ಧ ಹೋರಾಟ ನಡೆಸಲು ನಮಗೂ ಮುಜಗರ ಆಗಿದೆ. ಸಮಾಜದ ಶಾಸಕರಿಗೆ ಮಂತ್ರಿ ಸ್ಥಾನ, ಮಠಗಳಿಗೆ ಅನುದಾನ ಕೇಳುತ್ತಿಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಉದ್ದಾರಕ್ಕಾಗಿ ಶಿಕ್ಷಣ, ಉದ್ಯೋಗದಲ್ಲಿ 2ಎ ಮೀಸಲಾತಿ ಕೇಳುತ್ತಿದ್ದೇವೆ ಎಂದರು.

ಮಾಜಿ ಶಾಸಕರಾದ ನಂದಿಹಳ್ಳಿ ಹಾಲಪ್ಪ, ವಿಜಯಾನಂದ ಕಾಶಪ್ಪನವರ ಮಾತನಾಡಿದರು. ಶಾಸಕ ಪಿ.ಟಿ.ಪರಮೇಶ್ವರನಾಯ್ಕ, ಮಾಜಿ ಶಾಸಕ ಬಿ.ಚಂದ್ರನಾಯ್ಕ, ಜಿ.ಪಂ. ಸದಸ್ಯೆ ಶೀಲಾ ಕೊಟ್ರೇಶ ಕುಂಚೂರು, ಎಂ.ಪಿ.ಸುಮಾ ವಿಜಯ್, ಓದೋ ಗಂಗಪ್ಪ ಹಾಗೂ ಸಮಾಜದ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT