ಹೂವಿನಹಡಗಲಿ: ‘ತಾಲ್ಲೂಕಿನ ತುಂಗಭದ್ರಾ ನದಿ ತೀರದಲ್ಲಿ ನಡೆದಿರುವ ಮರಳು ಅಕ್ರಮ ದಂಧೆಯಲ್ಲಿ ಸ್ಥಳೀಯ ಪೊಲೀಸರೂ ಭಾಗಿಯಾಗಿದ್ದು, ಮೇಲೆ ಕ್ರಮ ಜರುಗಿಸಬೇಕು’ ಎಂದು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಆಗ್ರಹಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮರಳು ಸಾಗಣೆದಾರರು ಸ್ಟಾಕ್ ಯಾರ್ಡ್ನಲ್ಲಿ ಒಂದು ಪಾಸ್ ಪಡೆದು ಪೊಲೀಸರ ಅಭಯದಿಂದ ನಾಲ್ಕೈದು ಬಾರಿ ಮರಳು ತುಂಬಿ ಸಾಗಿಸುತ್ತಿದ್ದಾರೆ. ತಹಶೀಲ್ದಾರ್ ವಿರುದ್ಧ ಕ್ರಮ ಜರುಗಿಸಿದ ಮಾದರಿಯಲ್ಲೇ ಪೊಲೀಸರ ಮೇಲೆಯೂ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
‘ಲಾರಿಗಳಲ್ಲಿ ಅಕ್ರಮವಾಗಿ ಮರಳು ಸಾಗಿಸುವವರ ಮೇಲೆ ಕ್ರಮ ಕೈಗೊಳ್ಳದ ಪೊಲೀಸರು, ಮನೆ ದುರಸ್ತಿ, ಶೌಚಾಲಯ ಕಟ್ಟಿಕೊಳ್ಳಲು ಎತ್ತಿನ ಬಂಡಿಯಲ್ಲಿ ಮರಳು ಕೊಂಡೊಯ್ಯುವ ಅಮಾಯಕರನ್ನು ಬೆದರಿಸಿ ಕೇಸ್ ಹಾಕುತ್ತಿದ್ದಾರೆ’ ಎಂದು ಆರೋಪಿಸಿದರು.
‘ಐಜಿಪಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಜುಲೈನಲ್ಲಿ ಪತ್ರ ಬರೆದಿರುವೆ. ಜಿಲ್ಲಾಧಿಕಾರಿ, ಎಸ್ಪಿಗೆ ಮೌಖಿಕವಾಗಿ ತಿಳಿಸಿರುವೆ. ಈವರೆಗೂ ಕ್ರಮ ಕೈಗೊಂಡಿಲ್ಲ. ಕ್ರಮ ಜರುಗಿಸದೆ ನಿರ್ಲಕ್ಷಿಸಿದಲ್ಲಿ ಕಾಂಗ್ರೆಸ್ ಹಾಗೂ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.