ವಿಜಯನಗರ (ಹೊಸಪೇಟೆ): ತಾಲ್ಲೂಕಿನ ಕಮಲಾಪುರ ಪಟ್ಟಣದಲ್ಲಿ ಬುಧವಾರ ‘ಪೋಷಣ ಪಕ್ವಾಡ’ ಜಾಗೃತಿ ಜಾಥಾ ನಡೆಸಲಾಯಿತು.
ಪಟ್ಟಣದ ಐದನೇ ಅಂಗನವಾಡಿ ಕೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಪೌಷ್ಟಿಕತೆ, ರಕ್ತಹೀನತೆ ಹೋಗಲಾಡಿಸುವ ಕುರಿತು ತಿಳಿವಳಿಕೆ ಮೂಡಿಸಿದರು.
ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಪೌಷ್ಟಿಕ ಆಹಾರ ಸೇವಿಸುವುದರ ಪ್ರಯೋಜನಗಳ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ತಿಳಿಸಿದರು. ಇದೇ ವೇಳೆ ಪಟ್ಟಣದಲ್ಲಿ ಸಸಿಗಳನ್ನು ನೆಟ್ಟರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕಿ ಸುಜಾತ, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಡಾ. ಬಿ, ಆರ್. ಮಳಲಿ, ಸಮಾಜ ಸೇವಕ ವಿರೇಶ್, ಸುರೇಶ್ ಗೌಡ, ಐದನೇ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಮಂಜುಳಾ ಸೇರಿದಂತೆ ಇತರೆ ಅಂಗನವಾಡಿಗಳ ಕಾರ್ಯಕರ್ತೆಯರು, ಸಹಾಯಕಿರು ಪಾಲ್ಗೊಂಡಿದ್ದರು.