ಬಳ್ಳಾರಿ: ಅಲ್ಪಾವಧಿ ಶಿಕ್ಷೆಗೊಳಗಾದ ಬಂಧಿಗಳಿಗೆ ಗಾಂಧೀಜಿಯ 150ನೇ ಜಯಂತಿ ಅಂಗವಾಗಿ ವಿಶೇಷ ಮಾಫಿ ನೀಡಿ ಬಿಡುಗಡೆ ಮಾಡಬೇಕೆಂಬ ಸುಪ್ರೀಂ ಕೋರ್ಟ್ ಸೂಚನೆ ಅನ್ವಯ ಇಲ್ಲಿನ ಕೇಂದ್ರ ಕಾರಾಗೃಹದ ಏಳು ಕೈದಿಗಳನ್ನು ಪ್ರಧಾನ ಜಿಲ್ಲಾ ಮತ್ತು ಸೆಶೆನ್ಸ್ ನ್ಯಾಯಾಧೀಶ ಬಿ.ಎಸ್.ಬಿರಾದಾರ್ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಅವರು, ‘ಸನ್ನಡತೆಯೇ ಎಲ್ಲರ ಜೀವನದ ಧ್ಯೇಯಯವಾಗಬೇಕು’ ಎಂದರು.
ಸನ್ನಡತೆಯನ್ನು ಕೈಬಿಟ್ಟರೆ ಇಡೀ ಜಗತ್ತೇ ಕೈಬಿಡುತ್ತದೆ. ಹೀಗಾಗಿ ಕೈದಿಗಳು ಬಿಡುಗಡೆಯಾದ ಬಳಿಕ ಸನ್ನಡತೆಯನ್ನು ಮುಂದುವರಿಸಬೇಕು ಎಂದು ಸಲಹೆ ನೀಡಿದರು.
ರಾಮನಗರದ ಕೃಷ್ಣ, ಆನಂದ, ಚಿತ್ರದುರ್ಗದ ಹುಸೇನಿ, ಹಡಗಲಿಯ ಬಳೇಗಾರ ದಿವಾಕರ, ಆಂಧ್ರದ ಮೆಹಬೂಬ್ ನಗರದ ಗುರುಸ್ವಾಮಿ, ತಂದೆ ಮಗನಾದ ಸಿರುಗುಪ್ಪದ ಉಪ್ಪಲದೊಡ್ಡಿ ಸುಂಕಣ್ಣ ಮತ್ತು ಉಪ್ಪಲದೊಡ್ಡಿ ಪಾಂಡು ಬಿಡುಗಡೆಯಾದವರು.
ನ್ಯಾಯಾಧೀಶ ರಾದ ಎಸ್.ಬಿ.ಹಂದ್ರಾಳ್, ಪ್ರೊಬೆಷನರಿ ನ್ಯಾಯಾಧೀಶರಾದ ಗಂಗಾಧರ್ ಮತ್ತು ನಾಗೇಶ್, ಕಾರಾಗೃಹ ಸಲಹಾ ಮಂಡಳಿ ಸದಸ್ಯ ಟಿ.ಜಿ.ವಿಠಲ್, ಕಾರಾಗೃಹ ಅಧೀಕ್ಷಕ ಡಾ.ಪಿ.ರಂಗನಾಥ್, ವೈದ್ಯ ಡಾ ಗುಪ್ತಾ ಇದ್ದರು.