ಹೊಸಪೇಟೆ(ವಿಜಯನಗರ): ‘ಭಾರತ ಬಿಟ್ಟು ತೊಲಗಿ’ ಚಳವಳಿಯ ದಿನ (ಆ.9) ‘ಭಾರತ ರಕ್ಷಿಸಿ’ ಆಂದೋಲನ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಿಐಟಿಯು ಜಿಲ್ಲಾ ಅಧ್ಯಕ್ಷ ಆರ್. ಭಾಸ್ಕರ್ ರೆಡ್ಡಿ ತಿಳಿಸಿದ್ದಾರೆ.
ಸಿಐಟಿಯು, ರಾಜ್ಯ ಪ್ರಾಂತ ರೈತ ಸಂಘ ಹಾಗೂ ಡಿವೈಎಫ್ಐ ಸಂಘಟನೆಗಳನ್ನು ಒಳಗೊಂಡು ವಿಜಯನಗರ ಜಿಲ್ಲಾ ಜಂಟಿ ಹೋರಾಟ ಸಮಿತಿ ರಚಿಸಲಾಗಿದೆ. ಬುಧವಾರ ನಗರದ ಶ್ರಮಿಕ ಭವನದಲ್ಲಿ ನಡೆದ ಮೊದಲ ಸಭೆಯಲ್ಲಿ ಅವರು ಮಾತನಾಡಿದರು.
‘ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ, ಕೇಂದ್ರ ಸರ್ಕಾರ ಸಂಪೂರ್ಣ ವಿಫಲಗೊಂಡಿವೆ. ಕೋವಿಡ್ನಿಂದ ಮೃತರಾದ ಕುಟುಂಬದವರಿಗೆ ಪರಿಹಾರ ಒದಗಿಸುವುದು, ಕೃಷಿ, ಕಾರ್ಮಿಕ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಭಾರತ ರಕ್ಷಿಸಿ ಆಂದೋಲನ ನಡೆಸಲಾಗುವುದು’ ಎಂದು ಹೇಳಿದರು.
ಮುಖಂಡರಾದ ಎಂ.ಗೋಪಾಲ, ಕೆ.ಎಂ.ಸಂತೋಷ್ ಕುಮಾರ್, ಕೆ.ನಾಗರತ್ನಮ್ಮ, ಡಿ.ಎಂ.ಸ್ವಪ್ನಾ, ಎನ್. ಯಲ್ಲಾಲಿಂಗ, ಬಿ.ಮಹೇಶ್, ಕಲ್ಯಾಣಯ್ಯ, ಎಸ್. ಅನಂತಶಯನ ಇದ್ದರು.