ಹೊಸಪೇಟೆ (ವಿಜಯನಗರ): ವಿದ್ಯುತ್ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ಆದೇಶ ವಿರೋಧಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ (ಡಿವೈಎಫ್ಐ) ಕಾರ್ಯಕರ್ತರು ಸೋಮವಾರ ಸಂಜೆ ನಗರದ ಚಿತ್ತವಾಡ್ಗಿಯಲ್ಲಿ ಲ್ಯಾಟಿನ್, ಚಿಮಣಿ ಹಾಗೂ ಬುಡ್ಡಿ ದೀಪ ಹಿಡಿದು ಪ್ರತಿಭಟನೆ ನಡೆಸಿದರು.
ಸಂಘಟನೆಯ ತಾಲ್ಲೂಕು ಕಾರ್ಯದರ್ಶಿ ಕಲ್ಯಾಣಯ್ಯ ಮಾತನಾಡಿ, ‘ಬಿಜೆಪಿ ಸರ್ಕಾರ ಕೋವಿಡ್ನಿಂದ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವುದು ಬಿಟ್ಟು ವಿದ್ಯುತ್ ಬಿಲ್ ಹೆಚ್ಚಿಸಿ ಜನರನ್ನು ಮತ್ತಷ್ಟು ಕಷ್ಟಕ್ಕೆ ದೂಡಿದೆ. ಇದೇ ರೀತಿ ವಿದ್ಯುತ್ ದರ ಸತತವಾಗಿ ಹೆಚ್ಚಿಸುತ್ತ ಹೋದರೆ ಬಡವರು ಲ್ಯಾಟಿನ್, ಬುಡ್ಡಿ, ಚಿಮಣಿ ದೀಪದ ಅಡಿಯಲ್ಲಿ ಬದುಕಬೇಕಾಗುತ್ತದೆ’ ಎಂದರು.
‘ಕೂಡಲೇ ಹೆಚ್ಚಿಸಿರುವ ವಿದ್ಯುತ್ ದರ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಡಿವೈಎಫ್ಐ ರಾಜ್ಯ ಘಟಕದ ಉಪಾಧ್ಯಕ್ಷ ಬಿಸಾಟಿ ಮಹೇಶ್, ಮುಖಂಡರಾದ ಕೆ.ಎಂ.ಸಂತೋಷ್, ಪವನ್ಕುಮಾರ್, ಅಲ್ತಾಫ್, ನೂರ್, ಮಹಾಂತೇಶ್, ಬಿ.ಟಿ.ಸೂರ್ಯ, ಕುಲ್ಲಾಯಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.