ಹೊಸಪೇಟೆ (ವಿಜಯನಗರ): ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ ವಿರೋಧಿಸಿ ರಾಷ್ಟ್ರೀಯ ಗೋರ್ ಬಂಜಾರ್ ಕ್ರಾಂತಿ ಸಂಘದವರು ಶುಕ್ರವಾರ ನಗರದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಆಯೋಗವು ತನ್ನ ಉದ್ದೇಶದ ವಿರುದ್ಧವಾಗಿ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದೆ. ಅಸಂವಿಧಾನಿಕ, ಅವಾಸ್ತವಿಕ ಅಂಕಿ ಅಂಶಗಳು ವರದಿಯಲ್ಲಿವೆ. ಇಡೀ ವರದಿಯೇ ಅವೈಜ್ಞಾನಿಕವಾಗಿದ್ದು, ಅದರ ಶಿಫಾರಸು ಜಾರಿಗೆ ತರಬಾರದು ಎಂದು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಯವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದರು.
ಭೋವಿ, ಬಂಜಾರ, ಚಲವಾದಿ, ಕೊರಚ, ಕೊರಮ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳಿಗೆ ಕಂಟಕವಾಗಿರುವ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯು ಏಕಪಕ್ಷೀಯವಾಗಿದೆ. ಸಾರ್ವಜನಿಕ ಚರ್ಚೆಯಾಗದೆ ವರದಿ ತಯಾರಿಸಲಾಗಿದೆ. ಅದಕ್ಕೆ ಮಹತ್ವ ಕೊಡಬೇಕಿಲ್ಲ ಎಂದು ತಿಳಿಸಿದರು.
ಪರಿಶಿಷ್ಟ ಜಾತಿಗಳ ಸಹೋದರ ಸಮುದಾಯಗಳ ಮಧ್ಯೆ ದ್ವೇಷ ಬಿತ್ತಲು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಪ್ರಯತ್ನಿಸುತ್ತಿದ್ದಾರೆ. ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.
ಕೊಟ್ಟೂರು ತಾಲೂಕಿನ ದೂಪದಹಳ್ಳಿಯ ಶಿವಪ್ರಕಾಶ್ ಮಹಾರಾಜ್ ಸ್ವಾಮೀಜಿ, ಮುಖಂಡರಾದ ಹನುಮ ನಾಯ್ಕ, ಸ್ವಾಮಿ ನಾಯ್ಕ, ಹೇಮಗಿರಿ, ರಮೇಶ್ ನಾಯ್ಕ, ವೆಂಕಟೇಶ ನಾಯ್ಕ, ಶಿವಕುಮಾರ್, ರಾಘವೇಂದ್ರ ನಾಯ್ಕ, ಸುನಿಲ್ ನಾಯ್ಕ, ಅಲೋಕ್ ನಾಯ್ಕ ಇದ್ದರು.