ನವದೆಹಲಿ: ‘ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದಾಗ ಎರಡು ಬಾರಿ ನನ್ನನ್ನು ಬೈದು ಹೊರಗೆ ಕಳುಹಿಸಲಾಗಿದೆ. ನನ್ನ ವಿರುದ್ಧ ತಾರತಮ್ಯ ಮಾಡಲಾಗುತ್ತಿದೆ’ ಎಂದು ಉತ್ತರ ಪ್ರದೇಶದ ರಾಬರ್ಟ್ಸ್ಗಂಜ್ ಕ್ಷೇತ್ರದ ಬಿಜೆಪಿ ಸಂಸದ ಛೋಟೇ ಲಾಲ್ ಖರ್ವಾರ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಛೋಟೇ ಲಾಲ್ ಅವರು ಕಳೆದ ತಿಂಗಳು ಈ ಪತ್ರ ಬರೆದಿದ್ದು, ಪ್ರಧಾನಿಯವರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಎಸ್ಸಿ, ಎಸ್ಟಿ ಕಾಯ್ದೆಯನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ದಲಿತ ಸಂಘಟನೆಗಳು ದೇಶದಾದ್ಯಂತ ಪ್ರತಿಭಟನೆ ನಡೆಸಿದ ಕೆಲವೇ ದಿನಗಳಲ್ಲಿ, ಸಂಸದರು ಪ್ರಧಾನಿಗೆ ಪತ್ರ ಬರೆದ ವಿಷಯ ಬೆಳಕಿಗೆ ಬಂದಿದೆ.
ತನ್ನ ಲೋಕಸಭಾ ಕ್ಷೇತ್ರದಲ್ಲೇ ತಾರತಮ್ಯ ಎದುರಿಸುತ್ತಿದ್ದೇನೆ. ತಾನು ನೀಡಿರುವ ದೂರುಗಳನ್ನು ನಮ್ಮದೇ ಪಕ್ಷ ಪರಿಗಣಿಸುತ್ತಿಲ್ಲ ಎಂದು ಅವರು ಪ್ರಧಾನಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಪತ್ರದಲ್ಲಿ ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶದ ಬಿಜೆಪಿ ಮುಖ್ಯಸ್ಥ ಮಹೇಂದ್ರನಾಥ್ ಪಾಂಡೆ ಮತ್ತು ಮತ್ತೊಬ್ಬ ನಾಯಕ ಸುನಿಲ್ ಬನ್ಸಲ್ ಹೆಸರುಗಳನ್ನು ಉಲ್ಲೇಖಿಸಲಾಗಿದೆ.
ತಾರತಮ್ಯದ ಬಗ್ಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗಕ್ಕೂ ಛೋಟೇ ಲಾಲ್ ದೂರು ನೀಡಿದ್ದಾರೆ.