ಬಳ್ಳಾರಿ: ‘ವಾಣಿಜ್ಯ ಬ್ಯಾಂಕ್ಗಳಲ್ಲಿ ರೈತರು ಪಡೆದಿರುವ ಬೆಳೆ ಸಾಲ ಮನ್ನಾ ಪ್ರಕ್ರಿಯೆ ಆರಂಭವಾಗಿದ್ದು, ರೈತರು ಸಾಲದ ಸ್ವಯಂಘೋಷಣೆ ಪತ್ರಗಳನ್ನು ಬ್ಯಾಂಕ್ಗಳಿಗೆ ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾದ್ ಮನೋಹರ್ ತಿಳಿಸಿದರು.
‘ಪ್ರತಿ ದಿನ ಕನಿಷ್ಠ 40 ಮಂದಿಯಿಂದ ಘೋಷಣೆ ಪತ್ರ ಪಡೆಯಲು ಎಲ್ಲ ಬ್ಯಾಂಕ್ಗಳಲ್ಲೂ ಕೌಂಟರ್ಗಳನ್ನು ತೆರೆಯಲಾಗಿದೆ. ಪ್ರತಿ ಬ್ಯಾಂಕ್ಗೂ ಒಬ್ಬ ಗ್ರಾಮ ಲೆಕ್ಕಿಗರನ್ನು ನಿಯೋಜಿಸಲಾಗಿದೆ. ಭದ್ರತೆ ಸಲುವಾಗಿ ಪೊಲೀಸರನ್ನು ನಿಯೋಜಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಲಾಗಿದೆ’ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಯಾವುದೇ ಬ್ಯಾಂಕ್ನಲ್ಲಿ 500ಕ್ಕಿಂತ ಹೆಚ್ಚು ರೈತರು ಸಾಲ ಪಡೆದಿದ್ದರೆ ಒಂದಕ್ಕಿಂತ ಹೆಚ್ಚು ಕೌಂಟರ್ ತೆರೆಯಲು ಸೂಚಿಸಲಾಗಿದೆ. ಪ್ರತಿ ದಿನ ನಲವತ್ತಕ್ಕೂ ಹೆಚ್ಚು ರೈತರು ಬಂದರೆ ಅವರಿಗೆ ಟೋಕನ್ ನೀಡಿ ಮುಂದಿನ ದಿನಾಂಕವನ್ನು ಸೂಚಿಸಲಾಗುವುದು’ ಎಂದರು.
ದಾಖಲೀಕರಣ: ‘ಸಾಲಗಾರ ರೈತರ ಪೈಕಿ ಶೇ 95ರಷ್ಟು ಮಂದಿಯ ಮಾಹಿತಿಗಳನ್ನು ಸಾಲ ಮನ್ನಾ ಸಾಫ್ಟ್ವೇರ್ಗೆ ಅಳವಡಿಸಲಾಗಿದೆ. ಸಾಲ ಮನ್ನಾ ಮಾಡುವ ಮುನ್ನ ಫಲಾನುಭವಿಯ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಯನ್ನು ಪರಿಶೀಲಿಸಲಾಗುವುದು’ ಎಂದರು.