ಹೊಸಪೇಟೆ: ಸೋಮವಾರ ಸಂಜೆ ನಗರ ಹಾಗೂ ಸುತ್ತಮುತ್ತ ಜಿಟಿಜಿಟಿ ಮಳೆಯಾಗಿದ್ದರಿಂದ ವಾತಾವರಣ ಸಂಪೂರ್ಣ ತಂಪಾಯಿತು.
ಸಂಜೆ ಆರು ಗಂಟೆ ಸುಮಾರಿಗೆ ಆರಂಭವಾದ ಮಳೆ ರಾತ್ರಿ ಎಂಟು ಗಂಟೆಯ ವರೆಗೆ ಮುಂದುವರೆದಿತ್ತು. ಅನೇಕರು ಮಳೆಯಲ್ಲಿಯೇ ನೆನೆದುಕೊಂಡು ಹೋಗುತ್ತಿರುವ ದೃಶ್ಯ ರಸ್ತೆಗಳಲ್ಲಿ ಕಂಡು ಬಂತು. ಚಿಣ್ಣರು ಮಳೆಯಲ್ಲಿ ಆಟವಾಡಿ ಸಂಭ್ರಮಿಸಿದರು.
ಅನೇಕ ದಿನಗಳಿಂದ ಜನ ಮಳೆಯ ನಿರೀಕ್ಷೆಯಲ್ಲಿದ್ದರು. ಹಲವು ದಿನಗಳಿಂದ ಕಾರ್ಮೋಡ ಕವಿಯುತ್ತಿತ್ತು. ಇನ್ನೇನು ಮಳೆಯಾಗಿಯೇ ಬಿಟ್ಟಿತ್ತು ಅನ್ನುವಷ್ಟರಲ್ಲಿ ಮೋಡಗಳು ಚದುರಿ ಹೋಗುತ್ತಿದ್ದವು. ಇದರಿಂದ ಜನ ನಿರಾಶರಾಗುತ್ತಿದ್ದರು. ಆದರೆ, ಸೋಮವಾರ ವರ್ಷಧಾರೆಯಾಗಿ ನಿರಾಶೆಯ ಕಾರ್ಮೋಡ ತಾತ್ಕಾಲಿಕವಾಗಿ ದೂರವಾಯಿತು.
ತಾಲ್ಲೂಕಿನ ಹೊಸೂರು, ಮುದ್ಲಾಪುರ, ಕಾರಿಗನೂರು, ಸಂಕ್ಲಾಪುರ, ವ್ಯಾಸನಕೆರೆ ಸೇರಿದಂತೆ ಹಲವೆಡೆ ಮಳೆಯಾಗಿದೆ.