ಬಳ್ಳಾರಿ: ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರ ಪಡೆದಿರುವ ಬಿಜೆಪಿ ಸರ್ಕಾರದ ಅವಧಿ ಮುಗಿಯುವುದರೊಳಗೆ ರಾಮಮಂದಿರ ನಿರ್ಮಾಣವಾಗುವುದು ಖಚಿತ ಎಂದು ವಿಶ್ವೇಶತೀರ್ಥ ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಕೃಷ್ಣ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂದಿರ ನಿರ್ಮಾಣ ಕುರಿತು ರಾಜ್ಯ ಸಭೆಯಲ್ಲಿ ಇಷ್ಟು ದಿನ ಬಹುಮತ ಇರಲಿಲ್ಲ. ಮುಂದಿನ ವರ್ಷ ದೊರಕುತ್ತದೆ. ನಂತರ ರಾಮ ಮಂದಿರ ನಿರ್ಮಾಣ ಖಚಿತವಾಗಿ ಆಗುತ್ತದೆ ಎಂದರು.
5 ವರ್ಷಗಳ ಕಾಲ ಬಿಜೆಪಿ ಸರ್ಕಾರವೇ ಇರುತ್ತದೆ. ಸುಪ್ರೀಂ ಕೋರ್ಟ್ ಕೋರ್ಟ್ ಕೂಡ ಮಂದಿರ ನಿರ್ಮಾಣದ ಪರವಾಗಿಯೇ ತೀರ್ಪು ನೀಡುವ ನಿರೀಕ್ಷೆ ಇದೆ ಎಂದರು.
ಅಧಿಕಾರಕ್ಕಾಗಿ ಬಾಂಗ್ಲಾ ವಲಸಿಗರಿಗೆ ಬೆಂಬಲ ನೀಡಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ರಾಷ್ಟ್ರ ವಿರೋಧಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಅಷ್ಟೊಂದು ಸಿಟ್ಟು ಇರಬಾರದು. ಅವರ ಬಗ್ಗೆ ನನಗೆ ಬೇಸರವಿದೆ ಎಂದು ದೂರಿದರು.
ರಾಜ್ಯ ಸರ್ಕಾರದಲ್ಲಿ ಬಹುಮತದ ಗೊಂದಲ ಇನ್ನೂ ಮುಂದುವರಿದಿರುವುದು ವಿಷಾದನೀಯ.
ಜಾತ್ಯತೀತ ಸಿದ್ಧಾಂತ, ಎಡಪಂಥೀಯ- ಬಲಪಂಥೀಯ ವಿಭಜನೆಗಳನ್ನು ಬಿಟ್ಟು ಮೂರೂ ಪಕ್ಷಗಳು ಒಗ್ಗಟ್ಟಾದರೆ ಮಾತ್ರ ಗೊಂದಲಗಳು ಬಗೆಬಹರಿಯುತ್ತವೆ. ಜನರಿಗೆ ಉತ್ತಮ ಆಡಳಿತವೂ ದೊರಕುತ್ತದೆ ಎಂದರು.
ಬಿಜೆಪಿಯೂ ಸಂವಿಧಾನವನ್ನು ಒಪ್ಪಿಕೊಂಡಿದೆ. ಅದೂ ಜಾತ್ಯತೀತ ಪಕ್ಷವೇ.ಹೀಗಾಗಿ ಮೂರು ಪಕ್ಷಗಳು ಸೇರಿ ರಾಜ್ಯದಲ್ಲಿ ಅಧಿಕಾರ ನಡೆಸಬೇಕು ಎಂದು ಪ್ರತಿಪಾದಿಸಿದರು.