ಹೊಸಪೇಟೆ (ವಿಜಯನಗರ): ಬಿಪಿಎಲ್ ಕಾರ್ಡುದಾರರಿಂದ ಕಡಿಮೆ ಬೆಲೆಗೆ ಅಕ್ಕಿ ಖರೀದಿಸಿ ಅದನ್ನು ಕಾಳಸಂತೆಯಲ್ಲಿ ಮಾರಾಟಕ್ಕೆ ಕೊಂಡೊಯ್ಯುತ್ತಿದ್ದ ₹2.70 ಲಕ್ಷ ಮೌಲ್ಯದ 180 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಇಲ್ಲಿನ ಚಿತ್ತವಾಡ್ಗಿ ಪೊಲೀಸರು ಶುಕ್ರವಾರ ವಶಕ್ಕೆ ತೆಗೆದುಕೊಂಡಿದ್ದಾರೆ.
ಅಕ್ಕಿ ಸಾಗಣೆ ಮಾಡುತ್ತಿದ್ದ ಉತ್ತರ ಪ್ರದೇಶ ಕಮಲ್ಪುರದ ರಾಯ್ಸಾಬ್ ಗಿರಿ, ನೀರಜ್ ಕುಮಾರ್ ಎಂಬುವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಳ್ಳಾರಿಯಿಂದ ಹೊಸಪೇಟೆ ಮಾರ್ಗವಾಗಿ ಗುಜರಾತ್ನ ಕಂಟೈನರ್ನಲ್ಲಿ ಅಕ್ಕಿ ಸಾಗಿಸಲಾಗುತ್ತಿತ್ತು ಎಂದು ಎಸ್ಪಿ ಡಾ. ಅರುಣ್ ಕೆ. ತಿಳಿಸಿದ್ದಾರೆ.
ಆಹಾರ ಇಲಾಖೆಯ ಇನ್ಸ್ಪೆಕ್ಟರ್ ಅಜೀತ್ ಕುಮಾರ್ ಆರ್, ಶಿರಸ್ತೇದಾರ ನಾಗರಾಜ, ಚಿತ್ತವಾಡ್ಗಿ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಜಯಪ್ರಕಾಶ್, ಎಎಸ್ಐ ಎನ್.ಸರೋಜ, ಸಿಬ್ಬಂದಿ ಶಾರದಾ ಬಾಯಿ, ರಾಜೇಶ್, ತಿರುಮಲೇಶ್ ಹಾಗೂ ಚಂದ್ರಶೇಖರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಒಂದೇ ದಿನದಲ್ಲಿ ಇಬ್ಬರು ಮನೆಗಳ್ಳರ ಬಂಧನ:ಘಟನೆ ಜರುಗಿದ 24 ಗಂಟೆಗಳಲ್ಲಿ ಇಬ್ಬರು ಮನೆಗಳ್ಳರನ್ನು ಬಂಧಿಸಿರುವ ಇಲ್ಲಿನ ಬಡಾವಣೆ ಠಾಣೆ ಪೊಲೀಸರು ಅವರಿಂದ ₹50 ಸಾವಿರ ಮೌಲ್ಯದ ಚಿನ್ನಾಭರಣ, ₹15 ಸಾವಿರ ಮೌಲ್ಯದ ಎರಡು ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ಎಸ್.ಆರ್. ನಗರದ ಕಬೀರ್ ಅಹಮ್ಮದ್, ತಳವಾರಕೇರಿಯ ಸಣ್ಣಕ್ಕೆಪ್ಪ ಬಂಧಿತರು. ನಗರದ ಸಾರ್ವಜನಿಕ ಆಸ್ಪತ್ರೆ ಬಳಿಯ ಚಾಂದ್ಸಾಬ್ ಎಂಬುವರ ಮನೆಯಲ್ಲಿ ಗುರುವಾರ ಕಳುವು ಮಾಡಿದ್ದರು.
ಟಿ.ಬಿ ಡ್ಯಾಂ ಠಾಣೆಯ ಪಿಐ ಹುಲುಗಪ್ಪ, ಬಡಾವಣೆ ಠಾಣೆಯ ಪಿಐ ಎಸ್.ಪಿ. ನಾಯ್ಕ, ಸಿಬ್ಬಂದಿ ಚೌಡಪ್ಪ, ರವಿ ಪ್ರಕಾಶ್, ಬಸವರಾಜ್, ಸಂತೋಷ್ ಕುಮಾರ್, ಮಹೇಶ್ ಬಾದಗಿ, ಈಶ್ವರ್, ರಾಮಮೂರ್ತಿ, ಮಾಣಿಕ್ಯ ರೆಡ್ಡಿ ಕಾರ್ಯಾಚರಣೆಯಲ್ಲಿ ಇದ್ದರು.