ಹೊಸಪೇಟ: ಬ್ಯಾಂಕಿನಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ ಇಬ್ಬರು ಯುವಕರನ್ನು ಪಟ್ಟಣ ಠಾಣೆ ಪೊಲೀಸರು ಮಂಗಳವಾರ ಸಂಜೆ ಬಂಧಿಸಿದ್ದಾರೆ.
ನಗರದ ಊರಮ್ಮನಬೈಲಿನ ನಿವಾಸ ಮಂಜುನಾಥ ಅಲಿಯಾಸ್ ಸುಡುಗಾಡಿ ವೆಂಕಪ್ಪ (23), ಜನತಾ ಕಾಲೊನಿಯ ಸಂತೋಷ್ ಅಲಿಯಾಸ್ ಬಿದ್ದು ರಾಮಲಿ (22) ಬಂಧಿತರು.
‘ಸೆ. 2ರಂದು ನಸುಕಿನ ಜಾವ ನಗರದ ಸ್ಟೇಶನ್ ರಸ್ತೆಯ ಬ್ಯಾಂಕ್ ಆಫ್ ಇಂಡಿಯಾ ಕಚೇರಿಯ ಕಿಟಕಿ ಮುರಿದು, ಒಳಗೆ ನುಗ್ಗಿ ಪೀಠೋಪಕರಣಗಳಲ್ಲಿ ಹಣಕ್ಕಾಗಿಜಾಲಾಡಿದ್ದಾರೆ. ಎಲ್ಲೂ ಹಣವಿರದ ಕಾರಣ ಅಲ್ಲಿಂದ ಹೋಗಿದ್ದಾರೆ. ಬೆಳಿಗ್ಗೆ ಸಿಬ್ಬಂದಿ ಬ್ಯಾಂಕಿಗೆ ಬಂದಾಗ ವಿಷಯ ಗೊತ್ತಾಗಿ, ಅದೇ ದಿನ ಠಾಣೆಗೆ ದೂರು ಕೊಟ್ಟಿದ್ದಾರೆ. ದೂರಿನ ಮೇರೆಗೆ ತನಿಖೆ ನಡೆಸಿ, ಇಬ್ಬರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಡಿ.ವೈ.ಎಸ್ಪಿ. ವಿ. ರಘುಕುಮಾರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಸಿಪಿಐ ಪ್ರಸಾದ್ ಗೋಖಲೆ ನೇತೃತ್ವದ ತನಿಖಾ ತಂಡದಲ್ಲಿ ಪಿ.ಎಸ್.ಐ. ಎಚ್.ಆರ್. ನಾಯಕಿ, ಎ.ಎಸ್.ಐ.ಗಳಾದ ಕೃಷ್ಣಪ್ಪ, ಕೋದಂಡಪಾಣಿ, ಕಾನ್ಸ್ಟೆಬಲ್ಗಳಾದ ಹೆಗ್ಗಪ್ಪ, ಕಾಳೆ ನಾಯಕ, ಷಣ್ಮುಖ, ಮಲ್ಲೇಶ್, ಗಾಳೆಪ್ಪ ಇದ್ದರು.
ದೇಗುಲ ಹುಂಡಿ ಹಣ ಕಳವು:
ನಗರ ಹೊರವಲಯದ ಕಣಿವೆ ವೀರಭದ್ರೇಶ್ವರ ದೇಗುಲ, ಗಂಡಿ ಮಲ್ಲಿಯಮ್ಮ ದೇವಸ್ಥಾನದ ಹುಂಡಿ ಹಣವನ್ನು ಭಾನುವಾರ ರಾತ್ರಿ ಕಳ್ಳರು ದೋಚಿದ್ದಾರೆ. ಸೋಮವಾರ ಹುಂಡಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಹುಂಡಿಯಲ್ಲಿ ಎಷ್ಟು ಹಣವಿತ್ತು ತಿಳಿದಿಲ್ಲ. ದೇಗುಲದ ಅರ್ಚಕ ಚಿದಾನಂದ ಸ್ವಾಮಿ ನೀಡಿರುವ ದೂರಿನ ಮೇರೆಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.