ಮಡಿಕೇರಿ: ‘ರಾಷ್ಟ್ರದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರವಾಗಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಭವಿಷ್ಯದಲ್ಲಿ ರಕ್ತಕ್ರಾಂತಿ ಆಗಲೂಬಹುದು’ ಎಂದು ಮಾಜಿ ಸಚಿವ ಎಂ.ಸಿ. ನಾಣಯ್ಯ ಆತಂಕ ವ್ಯಕ್ತಪಡಿಸಿದರು.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಮಂಗಳವಾರ ನಡೆದ ‘ಪ್ರತಿಭೋತ್ಸವ’ದಲ್ಲಿ ಅವರು ಮಾತನಾಡಿದರು.
‘ರಾಷ್ಟ್ರದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ 50ರಷ್ಟು ಯುವ ಜನರಿದ್ದಾರೆ. ಅವರಲ್ಲಿ ಬಹುತೇಕರು ತಾವು ಪಡೆದ ವಿದ್ಯಾಭ್ಯಾಸಕ್ಕೆ ತಕ್ಕಂತೆ ಉದ್ಯೋಗ ಲಭಿಸುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು. ಯುವ ಜನಾಂಗಕ್ಕೆ ಉದ್ಯೋಗ ನೀಡುವತ್ತ ಗಮನ ಹರಿಸಬೇಕು’ ಎಂದು ಮನವಿ ಮಾಡಿದರು.
ಶಿಕ್ಷಣ ಪದ್ಧತಿ ವಿದ್ಯಾರ್ಥಿಗಳ ಜ್ಞಾನವನ್ನು ವೃದ್ಧಿಸಬೇಕು. ಜತೆಗೆ, ಕೌಶಲ ಹೆಚ್ಚಿಸುವುದರೊಂದಿಗೆ ಉದ್ಯೋಗಕ್ಕೂ ಅವಕಾಶ ಆಗುವಂತಾಗಬೇಕು ಎಂದು ಹೇಳಿದರು.
ಗುಣಮಟ್ಟದ ಶಿಕ್ಷಣದ ಕೊರತೆಯಿಂದ ಪದವೀಧರರಲ್ಲೂ ಜ್ಞಾನ, ಕೌಶಲದ ಕೊರತೆ ಕಾಣಿಸುತ್ತಿದೆ. ಮೊದಲು ವಿಶ್ವವಿದ್ಯಾಲಯಗಳು ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು. ಜತೆಗೆ, ಅಗತ್ಯ ಕೊಠಡಿ, ಮೂಲ ಸೌಕರ್ಯ, ನುರಿತ ಕ್ಷೇತ್ರ ತಜ್ಞರು ಹಾಗೂ ಪರಿಣಿತರಿಂದ ಬೋಧನೆಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಸ್ಮಾರ್ಟ್ಫೋನ್ ಅನ್ನು ಅಗತ್ಯಕ್ಕೆ ತಕ್ಕಂತೆ ಬಳಸಿದರೆ ಮಾತ್ರ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ; ಮೊಬೈಲ್ನಿಂದ ಎಷ್ಟು ಒಳಿತಿದೆಯೋ ಅಷ್ಟೇ ಕೆಡುಕೂ ಇದೆ. ಅತಿಯಾದ ಅವಲಂಬನೆ ವಿದ್ಯಾರ್ಥಿ ಜೀವನಕ್ಕೆ ಮಾರಕವಾಗಿಯೂ ಪರಿಣಮಿಸಬಹುದು ಎಂದು ಕಿವಿಮಾತು ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಬಿ.ಎಸ್. ನಾಗೇಂದ್ರ ಪ್ರಕಾಶ್ ಮಾತನಾಡಿ, ಎಫ್ಎಂಸಿ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದೆಂದು ಭರವಸೆ ನೀಡಿದರು.
ಪ್ರಾಂಶುಪಾಲೆ ಡಾ.ಪಾರ್ವತಿ ಅಪ್ಪಯ್ಯ ಕಾಲೇಜಿನ ವಾರ್ಷಿಕ ವರದಿ ಮಂಡಿಸಿದರು. ಹಿಂದಿ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ ಹೆಗಡೆ, ವಿದ್ಯಾರ್ಥಿ ಮುಖಂಡರಾದ ಲೋಹಿತ್ ಎಂ.ಆರ್., ಜನನಿ ಎಂ.ಡಿ., ಕೆ.ಪಿ. ತೃಪ್ತಿ, ಎಸ್.ಅರ್್. ಸ್ವಪ್ನಾ, ಕಿರಣ್ ಬಿ.ಐ., ಅರುಣ್ ಕುಮಾರ್ ಹಾಜರಿದ್ದರು.