ಹೊಸಪೇಟೆ: ಇಲ್ಲಿನ ಅನಂತಶಯನಗುಡಿ ಸಪ್ತಾಂಜನೇಯ ರಥೋತ್ಸವ ಶನಿವಾರ ಸಂಜೆ ಶ್ರದ್ಧಾ, ಭಕ್ತಿ ಹಾಗೂ ಸಡಗರ, ಸಂಭ್ರಮದಿಂದ ನೆರವೇರಿತು.
ಸಪ್ತಾಂಜನೇಯ ದೇವಸ್ಥಾನದಿಂದ ಹಂಪಿ–ಕಂಪ್ಲಿ ಮುಖ್ಯರಸ್ತೆಯಲ್ಲಿ ಭಕ್ತರು ತೇರು ಎಳೆದರು. ಈ ವೇಳೆ ಬಾಳೆಹಣ್ಣು, ಉತ್ತತ್ತಿ, ಹೂ ಎಸೆದು ಹರಕೆ ತೀರಿಸಿದರು. ಆಂಜನೇಯ ಸ್ವಾಮಿಗೆ ಜಯವಾಗಲಿ ಎಂದು ಘೋಷಣೆಗಳನ್ನು ಕೂಗಿದರು.
ರಥೋತ್ಸವ ಕಣ್ತುಂಬಿಕೊಳ್ಳಲು ವಿವಿಧ ಕಡೆಗಳಿಂದ ನೂರಾರು ಸಂಖ್ಯೆಯಲ್ಲಿ ಜನ ಬಂದಿದ್ದರು. ಇದರಿಂದ ಮುಖ್ಯರಸ್ತೆಯಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ತೇರಿಗೂ ಮುನ್ನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಿಗ್ಗೆಯಿಂದ ಸಂಜೆಯ ವರೆಗೆ ಜನ ಭೇಟಿ ನೀಡಿ ದೇವರ ದರ್ಶನ ಪಡೆದರು.