ಸಂಡೂರು: ಜಿಲ್ಲಾ ಖನಿಜ ನಿಧಿ ಪ್ರತಿಷ್ಠಾನದ ಅಡಿಯಲ್ಲಿ ಆರಂಭಿಸಲಾಗಿರುವ ‘ಸಂಡೂರು ಸ್ವಯಂ ಶಕ್ತಿ ಯೋಜನೆ’ ಅನ್ವಯ ತಾಲ್ಲೂಕಿನ 26 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ 2070 ಮಹಿಳೆಯರಿಗೆ ಸ್ಟೈಫಂಡ್ ಸಹಿತ ಹೊಲಿಗೆ ತರಬೇತಿ ನೀಡಿ, ಉಚಿತವಾಗಿ ಹೊಲಿಗೆ ಯಂತ್ರಗಳನ್ನು ನೀಡಲಾಗುತ್ತಿದೆ. ಮಹಿಳೆಯರು ತಮಗೆ ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಮತ್ತು ಕುಟುಂಬಕ್ಕೆ ಆಧಾರವಾಗಬೇಕು ಎಂದು ಶಾಸಕ ಈ. ತುಕಾರಾಂ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ ಧಾರವಾಡ ಅವರ ಸಹಯೋಗದಲ್ಲಿ ಶನಿವಾರ ತಾಲ್ಲೂಕಿನ ಯರ್ರಯ್ಯನಹಳ್ಳಿ, ಜಿ.ಎಲ್. ಹಳ್ಳಿ, ರಾಜಾಪುರ, ಮೆಟ್ರಿಕಿ ಹಾಗೂ ಡಿ. ಅಂತಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ತರಬೇತಿ ಪಡೆದ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ಚೋರನೂರು ಭಾಗದಲ್ಲಿ ಸಿದ್ಧ ಉಡುಪುಗಳ ತಯಾರಿಕೆ (ಅಪಾರಲ್ ಪಾರ್ಕ್) ಪಾರ್ಕ್ ಸ್ಥಾಪಿಸಲು ಯೋಜಿಸಿದ್ದೇವೆ. ಇದಕ್ಕೆ ಹತ್ತು ಎಕರೆ ಜಾಗದ ಅಗತ್ಯವಿದೆ. ಈ ಭಾಗದಲ್ಲಿ ಹತ್ತು ಎಕರೆ ಜಾಗ ಗುರುತಿಸಿ ತಿಳಿಸಿದರೆ ಅಪಾರಲ್ ಪಾರ್ಕ್ ಸ್ಥಾಪಿಸಲು ಅನುಕೂಲವಾಗಲಿದೆ. ಅಲ್ಲಿ 700 ಜನಕ್ಕೆ ಉದ್ಯೋಗ ಸಿಗಲಿದೆ. ಇದೇ ರೀತಿಯಾಗಿ ಬಂಡ್ರಿ ಭಾಗದಲ್ಲಿ ಫುಡ್ ಪಾರ್ಕ್ ಸ್ಥಾಪಿಸಲು ಮತ್ತು ಮಹಿಳೆಯರಿಗೆ ವಿವಿಧ ರೀತಿಯ ಸ್ವಯಂ ಉದ್ಯೋಗಕ್ಕೆ ಅವಕಾಶ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಜಿಲ್ಲಾ ಖನಿಜ ನಿಧಿ ಅನುದಾನದಲ್ಲಿ ತರಬೇತಿ ಪಡೆದು ಇತ್ತೀಚೆಗೆ ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾದ 350 ಜನರಿಗೆ ಉಚಿತವಾಗಿ ಲ್ಯಾಪ್ಟಾಪ್ ನೀಡಲಾಗುವುದು ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯರಾದ ಸರಸ್ವತಿ, ಸೌಭಾಗ್ಯ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಕುಮಾರಸ್ವಾಮಿ, ಶಂಕರಪ್ಪ, ವಸಗೇರಪ್ಪ, ಕೈಮಗ್ಗ ಮತ್ತು ಜವಳಿ ಇಲಾಖೆ ಡಿಡಿ ವಿಠಲ್ರಾವ್, ತಾಲ್ಲೂಕು ಪಂಚಾಯ್ತಿ ಇಒ ಕೆ.ಆರ್. ಪ್ರಕಾಶ್ ಉಪಸ್ಥಿತರಿದ್ದರು.