ಹೊಸಪೇಟೆ: ಶನೇಶ್ವರ ಜಯಂತಿಯನ್ನು ಇಲ್ಲಿನ ಪಂಚಾಚಾರ್ಯ ನಗರದಲ್ಲಿ ಸೋಮವಾರ ಶ್ರದ್ಧಾ, ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗಿನ ವರೆಗೆ ದೇವರ ಪುರಾಣ, ಪ್ರವಚನ ಹಾಗೂ ಭಜನೆ ನಡೆಯಿತು. ಸೋಮವಾರ ಬೆಳಿಗ್ಗೆಮಂಗಳವಾದ್ಯ ಸಮೇತ ಸ್ವಾಮಿಯ ಉತ್ಸವ ಮೂರ್ತಿಯೊಂದಿಗೆ ತೆರಳಿ ಗಂಗೆ ಪೂಜೆ ನೆರವೇರಿಸಿದರು.
ಬಳಿಕ ವಿಘ್ನೇಶ್ವರ, ಶನೇಶ್ವರ ಮತ್ತು ಜೇಷ್ಠಾದೇವಿಗೆ ತೈಲಾಭಿಷೇಕ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ವಿಶೇಷ ಹೂವಿನ ಅಲಂಕಾರದೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಶಾಂತಲಿಂಗೇಶ್ವರ, ನಂದಿ, ಶಾಂಭವಿಮಾತೆ, ಕಾಳಿಕಾ ಕಮಟೇಶ್ವರ ಸ್ವಾಮಿ ಹಾಗೂ ನವಗ್ರಹಗಳಿಗೆ ವಿಶೇಷ ನೆರವೇರಿಸಲಾಯಿತು.
ಜಿಲ್ಲೆ ಸೇರಿದಂತೆ ಕೊಪ್ಪಳ, ಗದಗ, ಹುಬ್ಬಳ್ಳಿ, ರಾಯಚೂರು, ಚಿತ್ರದುರ್ಗ, ದಾವಣಗೆರೆಯಿಂದ ಭಕ್ತರು ಬಂದಿದ್ದರು.
ಶನೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಶಾಂತವೀರನಗೌಡ್ರು, ಕಾರ್ಯದರ್ಶಿ ಎನ್.ಆಂಜನೇಯ, ಗೌರವ ಅಧ್ಯಕ್ಷ ಕೆ.ಈರಣ್ಣ, ನಿರ್ದೇಶಕರಾದ ಕೆ.ಎಂ.ಶರಣಯ್ಯ, ವಿ.ಕೊಟ್ರೇಶ, ಎಂ.ಮಲ್ಲಿಕಾರ್ಜುನ, ಕೆ.ಎಂ.ಚನ್ನಮ್ಮ, ಎನ್.ಮಂಜುನಾಥ ಹಾಗೂ ಎಸ್.ನಿರಂಜನ, ಮುಖಂಡರಾದ ಬಿ.ಹಾಲನಗೌಡ್ರು, ರುದ್ರಯ್ಯ ಇದ್ದರು.