ಹೊಸಪೇಟೆ: ’ಮನುಷ್ಯತ್ವವನ್ನು ಮರೆತ ಮನುಷ್ಯರಲ್ಲಿ ಪ್ರೀತಿಯಿಂದ ದೈವತ್ವವನ್ನು ಬಿತ್ತುವುದರ ಜೊತೆಗೆ ಅರಿವನ್ನು ಗುರುವಾಗಿಸಿಕೊಂಡು ಬದುಕುವ ಪರಿಯನ್ನು ಕಲಿಸಿಕೊಟ್ಟವರು ಬಸವಾದಿ ಶರಣರು‘ ಎಂದುಬಸವತತ್ವ ಪ್ರಚಾರಕ ಎಸ್. ಶಿವಾನಂದ ಹೇಳಿದರು.
ತಾಲ್ಲೂಕಿನ ಬುಕ್ಕಸಾಗರದಲ್ಲಿ ಸೋಮವಾರ ಸಂಜೆ ಶರಣ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿದ್ದ ಆರನೇ ಗ್ರಾಮೀಣ ಸಂಚಾರ ಶರಣತತ್ವ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು.’
‘ತಾನು ಯಾರು ಎಂದು ತಿಳಿಯದೇ ಮನುಷ್ಯ ಚಡಪಡಿಸುತ್ತಿದ್ದಾಗ ದೇವರು ಕಲ್ಲು ಮಣ್ಣುಗಳಲ್ಲಿ ಇಲ್ಲ ಎನ್ನುವ ಸತ್ಯವನ್ನು ತಿಳಿಸುತ್ತಾ ಮನುಷ್ಯನೇ ದೇವನಾಗಬಲ್ಲ ಎಂಬ ಸತ್ಯದ ಹಾದಿಯನ್ನು ಶರಣರು ತೋರಿಸಿಕೊಟ್ಟರು’ ಎಂದರು.
’ಶರಣರು ಕೊಟ್ಟ ಇಷ್ಟಲಿಂಗವೂ ದೇವರಲ್ಲ. ಅದು ಮನುಷ್ಯನಲ್ಲಿ ಅರಿವನ್ನು ಜಾಗೃತಿಗೊಳಿಸಿಕೊಳ್ಳುವ ಸಾಧನ. ಇಷ್ಟಲಿಂಗವೆಂಬ ಸಾಧನದೊಂದಿಗೆ ಶರಣರು ಹೇಳಿಕೊಟ್ಟ ಮಾರ್ಗದಲ್ಲಿ ಅನುಸಂಧಾನ ಮಾಡಿದರೆ ಎಲ್ಲರೂ ಕೂಡಿ ಕಲ್ಯಾಣ ರಾಜ್ಯ ಕಟ್ಟಬಹುದು‘ ಎಂದು ಹೇಳಿದರು.
ಮುಖಂಡ ವೀರಭದ್ರಪ್ಪ ಮಾತನಾಡಿ, ‘ಶರಣತತ್ವ ಇಂದು ಎಲ್ಲಾ ಸಮುದಾಯದವರಿಗೆ ಅನಿವಾರ್ಯ ಮತ್ತು ಶರಣತತ್ವದ ಪ್ರಚಾರದ ಕೆಲಸ ಇನ್ನಷ್ಟು ಹೆಚ್ಚಾಗಬೇಕು' ಎಂದರು.
ತಾಲ್ಲೂಕುಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ ಅಧ್ಯಕ್ಷತೆ ವಹಿಸಿದ್ದರು, ಬಸವ ಬಳಗದ ಅಧ್ಯಕ್ಷ ಬಸವಕಿರಣ ಸ್ವಾಮಿ, ವೈದ್ಯರಾದ ಟಿ. ಅಮರೇಶ್ವರ, ಮಾವಿನಹಳ್ಳಿ ಬಸವರಾಜ, ಡಾ. ನಂದೀಶ್ವರ ದಂಡೆ, ಗ್ರಾಮದ ಹಿರಿಯರಾದ ಇಟಗಿ ಶೇಖರಪ್ಪ, ತಿಪ್ಪೇಶ, ರಾಜಶೇಖರ, ಶರಣಪ್ಪ ಇದ್ದರು.