ಹೊಸಪೇಟೆ: ನಾಗರಪಂಚಮಿಯನ್ನು ಭಾನುವಾರ ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಶ್ರದ್ಧಾ, ಭಕ್ತಿಯಿಂದ ಜನ ಆಚರಿಸಿದರು.
ಜನ ಬೆಳಿಗ್ಗೆಯಿಂದಲೇ ನಾಗಪ್ಪನ ದೇವಸ್ಥಾನಕ್ಕೆ ಹೋಗಿ ಹೂ, ಕಾಯಿ ಸಮರ್ಪಿಸಿ, ಹಾಲಿನ ಅಭಿಷೇಕ ಮಾಡುತ್ತಿದ್ದ ದೃಶ್ಯ ಕಂಡು ಬಂತು. ನಗರದ ರಾಣಿಪೇಟೆಯ ನಾಗಪ್ಪನ ದೇಗುಲಕ್ಕೆ ವಿವಿಧ ಕಡೆಗಳಿಂದ ನೂರಾರು ಜನ ಬಂದು ಪೂಜೆ ಸಲ್ಲಿಸಿದರು. ಹೂವಿನಿಂದ ನಾಗಪ್ಪನಿಗೆ ವಿಶೇಷ ಅಲಂಕಾರ ಮಾಡಿ, ಬಳಿಕ ಕುಟುಂಬ ಸದಸ್ಯರೆಲ್ಲರೂ ಸೇರಿಕೊಂಡು ಹಾಲಿನ ಅಭಿಷೇಕ ಮಾಡಿದರು.
ಟಿ.ಬಿ. ಡ್ಯಾಂ ರಸ್ತೆ ನಾಗಪ್ಪನ ಕಟ್ಟೆ, ಸಂಡೂರು ರಸ್ತೆಯ ನಾಗದೇವತೆ ದೇವಸ್ಥಾನದಲ್ಲೂ ಜನಜಂಗುಳಿ ಕಂಡು ಬಂತು. ಜನ ಶ್ರದ್ಧಾ, ಭಕ್ತಿಯಿಂದ ನಾಗಪ್ಪನಿಗೆ ಹಾಲು ಸಮರ್ಪಿಸುತ್ತಿರುವುದು ಕಂಡು ಬಂತು.
ತಾಲ್ಲೂಕಿನ ಬುಕ್ಕಸಾಗರದ ಏಳು ಹೆಡೆ ನಾಗಪ್ಪ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಏಳುಹೆಡೆ ನಾಗಪ್ಪ, ತಾಯಿ ಮುದ್ದಮ್ಮ ದೇವಸ್ಥಾನಕ್ಕೆ ಭಕ್ತರು ಭೇಟಿ ಕೊಟ್ಟು ದರ್ಶನ ಪಡೆದರು. ದೋಷ ಪರಿಹಾರಕ್ಕಾಗಿ ಭಕ್ತರು ನಾಗಪ್ಪನ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಿದರು.
ಶ್ರೇಷ್ಠ ಮತ್ತು ಆಶ್ಲೇಷ ನಕ್ಷತ್ರದಲ್ಲಿ ಭಕ್ತರು ಪೂಜೆ ಸಲ್ಲಿಸುವುದು ವಿಶೇಷ. ನಾಗದೋಷ, ಕುಜದೋಷ, ರಾಹುಕೇತು, ಆಶ್ಲೇಷ ಬಲಿ, ಸಂತಾನಫಲ, ಕಂಕಣಭಾಗ್ಯದ ಹರಕೆ ತೀರಿಸಿದರು.
ಜಿಲ್ಲೆ ಸೇರಿದಂತೆ ಕೊಪ್ಪಳ, ರಾಯಚೂರು, ಹುಬ್ಬಳ್ಳಿ, ದಾವಣಗೆರೆ, ಬೆಳಗಾವಿ, ಆಂಧ್ರ ಪ್ರದೇಶದ ಗುಂತಕಲ್, ಅನಂತಪುರ, ಕರ್ನೂಲ್ನಿಂದ ಭಕ್ತರು ಬಂದಿದ್ದರು. ದಿನವಿಡೀ ಜಾತ್ರೆಯ ವಾತಾವರಣ ಇತ್ತು.