ಹೊಸಪೇಟೆ: ದಕ್ಷಿಣ ಕೊರಿಯಾದಲ್ಲಿ ಇತ್ತೀಚೆಗೆ ನಡೆದ ಜಂಪ್ ರೋಪ್ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ತೋರಿ ಪದಕ ಗಳಿಸಿದ ಕ್ರೀಡಾಪಟುಗಳನ್ನು ಶುಕ್ರವಾರ ಸಂಜೆ ನಗರದಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಜೆ. ಅನನ್ಯ, ಎಂ. ಶಶಾಂಕ್, ದೇವ್ ಕೆ. ರಾವಲ್, ಕೃತಿಕಾ, ಎಂ. ದೀಪ್ತಿ, ಎಸ್.ಡಿ. ಚಿನ್ಮಯಿ, ಪಿ. ವರ್ಷಾ, ಆಮ್ನಾ, ಮಂಜುಶ್ರೀ, ಸುಶಾಂತ್, ಪದ್ಮಾವತಿ, ವರ್ಷಾ ಅವರನ್ನು ಜಂಪ್ ರೋಪ್ ಫೆಡರೇಶನ್ ಆಫ್ ಇಂಡಿಯಾ ಹಾಗೂ ಕರ್ನಾಟಕ ಜಂಪ್ ರೋಪ್ ಅಸೋಸಿಯೇಶನ್ನಿಂದ ಸತ್ಕರಿಸಲಾಯಿತು.
ಬಳಿಕ ಮಾತನಾಡಿದ ಹನುಮಸಾಗರ ಅರ್ಬನ್ ಬ್ಯಾಂಕಿನ ಸಿ.ಇ.ಒ. ರಾಘವೇಂದ್ರ ಜಮಖಂಡಿ, ‘ಜಂಪ್ ರೋಪ್ ಆಟದಲ್ಲಿ ನಮ್ಮ ಮಕ್ಕಳು ಹಿರಿದಾದ ಸಾಧನೆ ಮಾಡಿರುವುದು ಒಳ್ಳೆಯ ಸಂಗತಿ. ಅವರಿಗೆ ಎಲ್ಲ ರೀತಿಯ ಪ್ರೋತ್ಸಾಹ ಸಿಗಬೇಕು’ ಎಂದು ಹೇಳಿದರು.
‘ಈ ಕ್ರೀಡೆಯಲ್ಲಿ ಭಾಗವಹಿಸುವ ಮಕ್ಕಳಿಗೆ ಉನ್ನತ ವ್ಯಾಸಂಗ, ಉದ್ಯೋಗದಲ್ಲಿ ಶೇ 5ರಷ್ಟು ಮೀಸಲಾತಿ ಸೌಲಭ್ಯ ದೊರೆಯುತ್ತದೆ. ದೈಹಿಕವಾಗಿ ಸದೃಢರಾಗಬಹುದು’ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಲ್. ಡಿ. ಜೋಶಿ ಮಾತನಾಡಿ, ‘ಜಂಪ್ರೋಪ್ ಕ್ರೀಡೆಯನ್ನು ಮುಂದಿನ ದಿನಗಳಲ್ಲಿ ವಲಯ ಮಟ್ಟ, ದಸರಾ ಕ್ರೀಡಾಕೂಟಗಳಲ್ಲಿ ಸೇರಿಸಿ, ಮಕ್ಕಳು ಅದರಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲಾಗುವುದು’ ಎಂದು ಹೇಳಿದರು.
ನಗರಸಭೆ ಪೌರಾಯುಕ್ತೆ ಪಿ. ಜಯಲಕ್ಷ್ಮಿ, ಕರ್ನಾಟಕ ಜಂಪ್ ರೋಪ್ ಅಕಾಡೆಮಿ ಅಧ್ಯಕ್ಷ ವಿಶ್ವನಾಥ್ ಹಿರೇಮಠ, ಅಥ್ಲೆಟಿಕ್ಸ್ ತರಬೇತುದಾರ ರೋಹಿಣಿ ಪರ್ವತಿಕರ್, ಮಹಾವೀರ್ ಜೈನ್, ರವಿಕುಮಾರ್, ಸುಧಾಕರ್ ಪೆಡ್ಡಿ, ಚಂದ್ರಕಾಂತ್ ಕಾಮತ್, ಬಸವರಾಜ್ ಜೆಟ್ಟಿ, ಪಾಂಡುರಂಗರಾವ್ ನಿಕಮ್, ಗಣೇಶ್, ವೆಂಕನಗೌಡರು ಇದ್ದರು.