ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವೀಟ್‌ ಸಮರ ಮತ್ತೆ ತೀವ್ರ

Last Updated 12 ಏಪ್ರಿಲ್ 2018, 19:38 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣಾ ಕಣದಲ್ಲಿ ರಂಗೇರುತ್ತಿದ್ದಂತೆ ಸಿದ್ದರಾಮಯ್ಯ ಹಾಗೂ ಬಿ.ಎಸ್‌. ಯಡಿಯೂರಪ್ಪ ನಡುವಿನ ಟ್ವೀಟ್‌ ಸಮರ ಮತ್ತೆ ತೀವ್ರಗೊಂಡಿದ್ದು, ಅಭಿವೃದ್ಧಿಯ ಕುರಿತ 10 ಪ್ರಶ್ನೆಗಳಿಗೆ ಉತ್ತರಿಸಿ ಮುಖ್ಯಮಂತ್ರಿ ಕೇಳಿದ್ದಾರೆ.‌

ಕಾಂಗ್ರೆಸ್ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲೂ ವಿಫಲಗೊಂಡಿದ್ದು, ದುರಾಡಳಿತದಿಂದ ಜನ ಬೇಸತ್ತಿದ್ದಾರೆ ಎಂದು ಬಿ.ಎಸ್‌.ವೈ ಟೀಕಿಸಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಸಿದ್ದರಾಮಯ್ಯ, ‘ಕರ್ನಾಟಕವನ್ನು ಭ್ರಷ್ಟ ರಾಜ್ಯವಾಗಿಸಿದ, ಬೆಂಗಳೂರನ್ನು ಗಾರ್ಬೇಜ್ ಸಿಟಿ ಎಂದು ಕುಖ್ಯಾತಿ ಗಳಿಸುವಂತೆ ಮಾಡಿದ ಹಾಗೂ ರೈತರ ಮೇಲೆ ಗೋಲಿಬಾರ್‌ಗೆ ಆದೇಶಿಸಿದವರೊಬ್ಬರು ಈ ರೀತಿ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಿರುವುದು ವಿಪರ್ಯಾಸ. ಆಧಾರ ರಹಿತ ಆರೋಪಗಳ ಹೊರತಾಗಿ ಕರ್ನಾಟಕದ 6.5 ಕೋಟಿ ಜನತೆಗೆ ನೀಡಲು ನಿಮ್ಮ ಬಳಿ ಏನಿದೆ’ ಎಂದು ಪ್ರಶ್ನಿಸಿದ್ದಾರೆ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಟ್ವೀಟ್‌ನಲ್ಲಿ ಕೆಣಕಿದ್ದಾರೆ.

* ಕನ್ನಡಿಗರ ಆಕಾಂಕ್ಷೆಯಂತೆ ನಾಡಿಗೆ ತನ್ನದೇ ಆದ ಪ್ರಮುಖ ಗುರುತು ಒದಗಿಸುವ ನಾಡಧ್ವಜ ಹೊಂದಲು ನೀವು ಬೆಂಬಲಿಸುತ್ತೀರಾ?

* ಸ್ವತಂತ್ರ ಧರ್ಮಕ್ಕಾಗಿ ಬಸವೇಶ್ವರ ಅನುಯಾಯಿಗಳ ಆಕಾಂಕ್ಷೆಗಳನ್ನು ನೀವು ಬೆಂಬಲಿಸುತ್ತೀರಾ?

* ಮಹದಾಯಿ ಸಮಸ್ಯೆಯನ್ನು ಶೀಘ್ರ ಪರಿಹರಿಸಲು ಪ್ರಧಾನಿ ಮಧ್ಯಸ್ಥಿಕೆಯನ್ನು ಬೆಂಬಲಿಸುತ್ತೀರಾ?

* ಕೇಂದ್ರ ಸರ್ಕಾರವು ವಾಣಿಜ್ಯ ಬ್ಯಾಂಕುಗಳಲ್ಲಿರುವ ರಾಜ್ಯದ ರೈತರ ಸಾಲ ಮನ್ನಾ ಮಾಡಬೇಕು ಎನ್ನುವುದನ್ನು ಬೆಂಬಲಿಸುತ್ತೀರಾ?

* ಮಹಾರಾಷ್ಟ್ರದ ಯಾವತ್ಮಲ್‌ನಲ್ಲಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡು, ಅದಕ್ಕೆ ಪ್ರಧಾನಿಯೇ ಹೊಣೆ ಎಂದಿದ್ದರು. ರೈತರ ಆತ್ಮಹತ್ಯೆಗಳಿಗೆ ನೀವು ನಮ್ಮನ್ನು ದೂಷಿಸುತ್ತೀರ ಎಂದಾದರೆ ಈ ವಿಚಾರದಲ್ಲಿ ನೀವೇನು ಮಾಡುವಿರಿ?

* ನೀವು ನೂರಾರು ಎಕರೆಗಳಷ್ಟು ಬಿಡಿಎ ಭೂಮಿಯನ್ನು ಡಿನೋಟಿಫೈ ಮಾಡಿದ್ದರಿಂದ ಹಲವಾರು ಮಂದಿ ಮನೆಗಳನ್ನು ಕಳೆದುಕೊಂಡಿದ್ದಾರೆ. ಏಕೆ ಹಾಗೆ ಮಾಡಿದ್ದು?

* ರೆಡ್ಡಿ ಸಹೋದರರು ₹25,000 ಕೋಟಿ ಖನಿಜ ಸಂಪತ್ತನ್ನು ಲೂಟಿ ಮಾಡಲು ನೀವು ಬಿಟ್ಟಿದ್ದು ಏಕೆ? ಆ ಸಂದರ್ಭದಲ್ಲಿ ನೀವೇಕೆ ಅಸಹಾಯಕರಾದದ್ದು?

* ಅನ್ನಭಾಗ್ಯ ಯೋಜನೆಯಡಿ 4 ಕೋಟಿಗೂ ಅಧಿಕ ಜನರಿಗೆ ತಿಂಗಳಿಗೆ 7 ಕೆ.ಜಿ ಉಚಿತ ಅಕ್ಕಿ ಹಾಗೂ 1 ಕೋಟಿ ಮಕ್ಕಳಿಗೆ ಹಾಲು ನೀಡುತ್ತಿದ್ದೇವೆ. ನೀವು ಇದಕ್ಕಿಂತ ಭಿನ್ನವಾಗಿ ಏನು ಮಾಡುತ್ತೀರಿ?

* ಬಿಜೆಪಿಯ ಮೂವರು ಮುಖ್ಯಮಂತ್ರಿಗಳು 5 ವರ್ಷಗಳಲ್ಲಿ 6 ಕಿ.ಮೀ ಮೆಟ್ರೊ ಮಾರ್ಗವನ್ನು ನಿರ್ಮಿಸಿದ್ದರು. ನಾವು 5 ವರ್ಷಗಳಲ್ಲಿ 36 ಕಿ.ಮೀ ಮೆಟ್ರೊ ಮಾರ್ಗ ನಿರ್ಮಿಸಿದ್ದೇವೆ. ಹಂತ-2 ಮತ್ತು ಹಂತ-3 ಸಿದ್ಧತೆಯ ಹಂತದಲ್ಲಿವೆ.

* ಕೇಂದ್ರದಿಂದ ಉಪನಗರ ರೈಲು ಯೋಜನೆಗೆ ಅನುದಾನ ದೊರೆಯುವಂತೆ ಮಾಡಿದ್ದೇವೆ. ಎಲೆಕ್ಟ್ರಿಕ್ ಬಸ್‌ ಜಾರಿಗೊಳಿಸುತ್ತಿದ್ದೇವೆ. ಬಿಎಂಟಿಸಿ ಬಸ್‌ಗಳ ಸಂಖ್ಯೆ ಹೆಚ್ಚಿಸಿದ್ದೇವೆ. ಸಂಚಾರ ದಟ್ಟಣೆ ನಿವಾರಣೆಗೆ ನಿಮ್ಮ ಪ್ರಕಾರ ಪರಿಹಾರವೇನು?

ಮತದಾರರೊಂದಿಗೆ ನಿಮ್ಮ ದೂರದೃಷ್ಟಿಯ ಬಗ್ಗೆ ಮಾತನಾಡಿ ಮತ್ತು ಆಧಾರ ರಹಿತ ಆರೋಪ ಮಾಡುವುದನ್ನು ನಿಲ್ಲಿಸಿ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT