ಹರಪನಹಳ್ಳಿ : ‘ಚಿನ್ನಾ ನಾನು ಈಗ ಬ್ರಾಂದಿ, ವಿಸ್ಕಿ ಕುಡಿಯುವುದು ಬಿಟ್ಟಿದ್ದೇನೆ, ನಿನಗೆ ಕಟ್ಟಿದ ಮಾಂಗಲ್ಯ ಸಾಕ್ಷಿಯಾಗಿ ಇನ್ಮುಂದೆ ಹೊಸ ಜೀವನ ನಡೆಸೋಣ. ನವ ಜೀವನ ಆರಂಭಿಸಿ, ಆದರ್ಶ ದಂಪತಿ ಆಗೋಣ ಬಾ’
ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರಾಜ್ಯ ತಾಂಡಾ ಅಭಿವೃದ್ಧಿ ನಿಗಮದಿಂದ ಆಯೋಜಿಸಿದ್ದ 1,585ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ, ಕುಡಿತದ ಚಟದಿಂದ ಮುಕ್ತಿ ಹೊಂದಲು ಸಂಕಲ್ಪ ಮಾಡಿರುವ ಶಿಬಿರಾರ್ಥಿಗಳು ತಮ್ಮ ಹೆಂಡತಿ ಎದುರು ಪ್ರಮಾಣ ಮಾಡಿದರು.
ಸೆ.15ರಂದು ಆರಂಭವಾಗಿದ್ದ ಮಧ್ಯ ವರ್ಜನ ಶಿಬಿರದಲ್ಲಿ ವಿವಿಧ ತಾಂಡ, ಗ್ರಾಮಗಳಿಂದ 93 ಜನ ಶಿಬಿರ ಸೇರ್ಪಡೆ ಆಗಿದ್ದರು. ಗ್ರಾಮಾಭಿವೃದ್ದಿ ಯೋಜನೆಯ ಸಂಪನ್ಮೂಲ ಶಿಕ್ಷಕರು, ವೈದ್ಯರು ನಿರಂತರ ಏಳು ದಿನ ಸುಂದರ ಜೀವನ, ಕುಟುಂಬ ನಿರ್ವಹಣೆ, ಕುಡಿತದ ಚಟದಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು. ಏಳು ದಿನದ ನಂತರ ಶಿಬಿರಾರ್ಥಿಗಳಿಗೆ ಅವರ ಹೆಂಡತಿಯರನ್ನು ಸ್ಥಳಕ್ಕೆ ಕರೆಯಿಸಿ, ಕುಟುಂಬ ಉತ್ಸವ ಆಚರಿಸಿ, ನವಜೀವನ ಆರಂಭಿಸಲು ಪ್ರೋತ್ಸಾಹಿಸಿದರು.
ಶಿಬಿರದಲ್ಲಿ 27 ಜನ ಯುವಕರು, ತಮ್ಮ ತಾಯಿ ಎದುರು ಪ್ರಮಾಣ ಮಾಡಿದರು. ಪತಿ ಕುಡಿತದ ಚಟಕ್ಕೆ ದಾಸನಾಗಿದ್ದರಿಂದ ಬೇಸರಗೊಂಡು ತವರೂರಿಗೆ ತೆರಳಿದ್ದ 6 ಮಹಿಳೆಯರು ಶಿಬಿರಕ್ಕೆ ಆಗಮಿಸಿ ಗಂಡನ ಮನೆಯಲ್ಲಿ ಜೀವನ ನಡೆಸುವುದಾಗಿ ತಿಳಿಸಿದ್ದು ವಿಶೇಷವಾಗಿತ್ತು.
ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಯಾಸ್, ಜಿಲ್ಲಾ ನಿರ್ದೇಶಕ ಜನಾರ್ಧನ್, ಗೌರವ ಸಲಹೆಗಾರ ವಿಲಿಯಂ ಮಿರಾಂಡ್, ಜಿಲ್ಲಾ ಉಪಾಧ್ಯಕ್ಷ ಪಿ.ಅರವಿಂದನ್, ಸಿದ್ದೇಶ್ವರ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಲಿಂಬ್ಯನಾಯ್ಕ, ಯೋಜನಾಧಿಕಾರಿ ಡಿ.ಸುಬ್ರಹ್ಮಣ್ಯ, ಶಾಂತಾರಾಮ್ ವಿಠಲ್ ಇದ್ದರು.