ಹೊಸಪೇಟೆ: ಯುವಧ್ವನಿ ಯುವಜನರ ಒಕ್ಕೂಟದಿಂದ ಹಮ್ಮಿಕೊಂಡಿರುವ ‘ಕಸ ಮುಕ್ತ ಸಮಾಜದೆಡೆಗೆ ನಮ್ಮ ನಡೆ’ ಕಾರ್ಯಕ್ರಮಕ್ಕೆ ಶನಿವಾರ ಚಿತ್ತವಾಡ್ಗಿಯಲ್ಲಿ ಚಾಲನೆ ನೀಡಲಾಯಿತು.
ಅಸ್ವಚ್ಛತೆಯಿಂದ ನಗರ ಹಾಗೂ ತಾಲ್ಲೂಕಿನ ಸುತ್ತಮುತ್ತಲ ಹಳ್ಳಿಗಳಲ್ಲಿ ಜನರ ಆರೋಗ್ಯದ ಮೇಲಾಗುತ್ತಿರುವ ಪರಿಣಾಮದ ಕುರಿತು ಬೀದಿನಾಟಕದ ಮೂಲಕ ಜಾಗೃತಿ ಮೂಡಿಸಿದರು. ಪರಿಸರದ ಹಾಡುಗಳನ್ನು ಹಾಡಿದರು. ಸ್ಥಳೀಯರು ನಾಟಕ ನೋಡಿ, ಹಾಡು ಆಲಿಸಿ, ಚಪ್ಪಾಳೆ ಹೊಡೆದು ಪ್ರಶಂಸೆ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ‘ಯುವಧ್ವನಿ’ ತಂಡದ ಶಿವು, ‘ಕಸದಿಂದ ಜನರ ಆರೋಗ್ಯದ ಮೇಲೆ ಏನೆಲ್ಲ ಅಡ್ಡಪರಿಣಾಮಗಳು ಆಗುತ್ತಿವೆ ಎನ್ನುವುದನ್ನು ನ್ಯಾವ್ಯಾರೂ ಯೋಚನೆ ಮಾಡುತ್ತಿಲ್ಲ. ಅದರ ಬಗ್ಗೆ ಪ್ರತಿಯೊಬ್ಬರೂ ಯೋಚಿಸಬೇಕು. ನಾವು ಉಸಿರಾಡುವ ಗಾಳಿ ವಿಷವಾಗದಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.
ಅಭಿಯಾನದಲ್ಲಿ ಚಿತ್ತವಾಡ್ಗಿ ವಿನೋಬಾ ಭಾವೆ ಶಾಲಯ ಮಕ್ಕಳು ಪಾಲ್ಗೊಂಡಿದ್ದರು. ಒಕ್ಕೂಟದ ಸುನೀತಾ, ನಸ್ರೀನ್ ಚಿತ್ತವಾಡ್ಗಿ, ಪದ್ಮಾ, ಲಕ್ಷ್ಮಿ, ಉದಯ್, ಸುನಿಲ್ ಇದ್ದರು.