ಬಳ್ಳಾರಿ: ರಾಜ್ಯದ ಹದಿನಾಲ್ಕು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಕೋ ಬ್ಯಾಂಕ್ ಬೆಳ್ಳಿ ಮಹೋತ್ಸವ 2019ರ ಜನವರಿ 5 ರಿಂದ ವರ್ಷವಿಡೀ ನಡೆಯಲಿದೆ ಎಂದು ಬ್ಯಾಂಕ್ ಅಧ್ಯಕ್ಷ ಮೋಹಿತ್ ಮಸ್ಕಿ ತಿಳಿಸಿದರು.
ಜನವರಿ 05ರಂದು ನಗರದಲ್ಲಿ ಸುಸ್ಥಿರ ಕೃಷಿಗಾಗಿ ಓಟ ವನ್ನು ಏರ್ಪಡಿಸಲಿದ್ದು, ಮೊದಲ ಬಹುಮಾನವಾಗಿ 25 ಸಾವಿರ ರುಪಾಯಿ, ಎರಡನೇ ಬಹುಮಾನ 15 ಸಾವಿರ ಮತ್ತು ತೃತೀಯ ಬಹುಮಾನ 10 ಸಾವಿರ ರುಪಾಯಿ ನೀಡಲಾಗುವುದು ಎಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬರ ಗೆದ್ದವರೊಡನೆ ಸಂವಾದ: ಅಂದು ಮಧ್ಯಾಹ್ನ ಜಿಲ್ಲಾ ಪಂಚಾಯ್ತಿಯಲ್ಲಿ ಬರಗೆದ್ದ ರಾಜ್ಯದ 45 ಕೃಷಿಕರೊಂದಿಗೆ ಕೃಷಿ ಸಚಿವ ಶಿವಶಂಕರ ರೆಡ್ಡಿ ಸಂವಾದ ನಡೆಸಲಿದ್ದಾರೆ.
ಉತ್ತರ ಕರ್ನಾಟಕದ ಮರೆತು ಹೋದ ತಿಂಡಿಗಳು ಮತ್ತು ಸಿರಿಧಾನ್ಯ ಖಾದ್ಯಗಳ ತಯಾರಿಕೆ ಸ್ಪರ್ಧೆ, ಪ್ರದರ್ಶನ ಮತ್ತು ಮಾರಾಟ ಮೇಳ ಬಸವ ಭವನದಲ್ಲಿ ಸಂಜೆ ನಡೆಯಲಿದೆ ಎಂದರು.
ಬ್ಯಾಂಕ್ ಮೂರು ವರ್ಷದಿಂದ ಪ್ರಗತಿ ಪರ ರೈತರಿಗೆ ಸುಕೃತ ಪ್ರಶಸ್ತಿ ನೀಡುತ್ತಿದ್ದು, ಈ ಬಾರಿಯೂ ಪ್ರಶಸ್ತಿ ಪ್ರದಾನ ಸಮಾರಂಭ ಬಸವ ಭವನದಲ್ಲೆ ನಡೆಯಲಿದೆ. ಪುರಸ್ಕೃತ ರನ್ನು ಸಮಿತಿ ಆಯ್ಕೆಮಾಡಲಿದೆ ಎಂದರು.
ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಬಾಲಪ್ರತಿಭೆಗಳಾದ ಜ್ಞಾನೇಶ್. ಪ್ರಕೃತಿ ರೆಡ್ಡಿ ಮತ್ತು ವಿಶ್ವಪ್ರಸಾದ್ ಸುಕೋ ಸಂಗೀತ ಸಂಜೆಯನ್ನು ನಡೆಸಿಕೊಡಲಿದ್ದಾರೆ ಎಂದರು.
ಬ್ಯಾಂಕಿನ ವ್ಯವಸ್ಥಾಪಕ ಪರಿಮಳಾಚಾರ್ಯ ಅಗ್ನಿಹೋತ್ರಿ, ಆಡಳಿತ ಮಂಡಳಿ ಕಾರ್ಯದರ್ಶಿ ವೆಂಕಟೇಶ್ವರ ರಾವ್ ಇದ್ದರು.